ಬೆಂಗಳೂರು: ಕಾಡಾನೆ ಹಾವಳಿಯಿಂದ ಕೊಡಗು ಜಿಲ್ಲೆಯ ಬತ್ತ, ಕಾಫಿ ಬೆಳೆ ನಾಶವಾಗುತ್ತಿರುವ ಕುರಿತು ಜೆಡಿಎಸ್ನ ಎಂ.ಸಿ. ನಾಣಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ನೀಡಿದ ಉತ್ತರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಯಿತು. ಈ ಉತ್ತರ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ವಿಮಲಾ ಗೌಡ ಅವರಿಗೆ `ತಮಾಷೆ~ ಎಂದೆನಿಸಿತು!
ಕಾಡಾನೆಗಳ ಹಾವಳಿಯಿಂದ ಬೆಳೆ ನಾಶ ಮತ್ತು ಪ್ರಾಣ ಹಾನಿ ಸಂಭವಿಸಿರುವ ಕುರಿತು ನಾಣಯ್ಯ ಸೋಮವಾರ ಪರಿಷತ್ತಿನ ಗಮನ ಸೆಳೆದರು. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಯೋಗೇಶ್ವರ್, `ಮೇವಿಗಾಗಿ ಕಾಡಿನಲ್ಲಿ ದನ-ಕರುಗಳು ಮತ್ತು ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಬತ್ತ, ತೆಂಗು, ಬಾಳೆ, ಹಲಸು ಬೆಳೆಗಳನ್ನು ಕೊಡಗಿನ ಕೃಷಿ ಭೂಮಿಯಲ್ಲಿ ಬೆಳೆಸುತ್ತಿರುವುದು ಕಾಡಾನೆಗಳನ್ನು ಆಕರ್ಷಿಸುತ್ತಿದೆ~ ಎಂದರು.
ಸಚಿವರು ನೀಡಿದ ಉತ್ತರ ನಾಣಯ್ಯ ಅವರನ್ನು ತೀವ್ರವಾಗಿ ಕೆರಳಿಸಿತು. `ಕೊಡಗಿನ ಕುರಿತು ಅರಿವು ಇದ್ದಿದ್ದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಉತ್ತರ ಬರೆದುಕೊಡುತ್ತಿರಲಿಲ್ಲ. ಆ ಉತ್ತರಕ್ಕೆ ಸಹಿ ಮಾಡಿ, ಸಚಿವರು ಸದನದಲ್ಲಿ ಮಂಡಿಸುತ್ತಿರಲಿಲ್ಲ. ಹತ್ತು ವರ್ಷಗಳಿಂದೀಚೆಗೆ ಕೊಡಗಿನಲ್ಲಿ ಕಾಡಾನೆ ಹಾವಳಿ ಕಂಡುಬರುತ್ತಿದೆ. ಆದರೆ ಬತ್ತವನ್ನು ತಲೆತಲಾಂತರದಿಂದ ಬೆಳೆಯಲಾಗುತ್ತಿದೆ. ಹಿಂದೆ ಕಾಡಾನೆ ಕಾಟ ಇರಲಿಲ್ಲ~ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
`ತೆಂಗು, ಹಲಸು, ಬಾಳೆ ಕೊಡಗಿನ ಮೂಲ ಬೆಳೆ ಅಲ್ಲ. ಅವುಗಳನ್ನು ಮನೆಯ ಸುತ್ತ ಅಲ್ಪ ಪ್ರಮಾಣದಲ್ಲಿ ಮಾತ್ರ ಬೆಳೆಯಲಾಗುತ್ತದೆ, ತೋಟದ ರೂಪದಲ್ಲಿ ಅದನ್ನು ಕೊಡಗಿನಲ್ಲಿ ಬೆಳೆಯುವುದಿಲ್ಲ. ಅವು ಆನೆಗಳನ್ನು ಆಕರ್ಷಿಸುವುದು ಹೇಗೆ?~ ಎಂದು ಪ್ರಶ್ನಿಸಿದ ನಾಣಯ್ಯ, `ಇಂಥ ಉತ್ತರ ಬರೆದುಕೊಟ್ಟ ಅಧಿಕಾರಿಗಳಿಗೆ ಹಕ್ಕುಚ್ಯುತಿ ನೋಟಿಸ್ ನೀಡಬೇಕು. ತಮ್ಮ ಇಲಾಖೆ ಏನು ಎಂಬುದನ್ನು ಸಚಿವರೂ ಅರ್ಥ ಮಾಡಿಕೊಳ್ಳಬೇಕು~ ಎಂದು ಗುಡುಗಿದರು.
ಆನೆ ಹಾವಳಿ ಇರುವ ಪ್ರದೇಶಗಳ ಅಂಚಿನಲ್ಲಿ ಸೌರಬೇಲಿ (237 ಕಿ.ಮೀ) ನಿರ್ಮಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ, ಸೌರಬೇಲಿ ಹಾಳುಬಿದ್ದಿದೆ. ಆನೆ ಬಾರದಂತೆ ತಡೆಯುವ ಕಂದಕಗಳ ನಿರ್ಮಾಣವೂ ದೊಡ್ಡ ದಂಧೆಯ ಸ್ವರೂಪ ಪಡೆದಿದೆ ಎಂದು ದೂರಿದರು.
ಕಾಡಾನೆ ಹಾವಳಿಗೆ ಮೂರು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಕೊಡಗಿನ ಜನ ಕಾನೂನು ಕೈಗೆತ್ತಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
`ತಮಾಷೆ ಎನಿಸುತ್ತಿದೆ!~: ಈ ಸಂದರ್ಭದಲ್ಲಿ ಸಭಾಪತಿಗಳ ಸ್ಥಾನದಲ್ಲಿದ್ದ ವಿಮಲಾ ಗೌಡ ಅವರು, `ಸಚಿವರು ನೀಡಿರುವ ಉತ್ತರ ತಮಾಷೆ ಎನಿಸುತ್ತಿದೆ. ಆನೆಗಳು ಮೇವಿಗಾಗಿ ದನಕರುಗಳ ಜೊತೆ ಪೈಪೋಟಿಗೆ ಇಳಿಯುತ್ತವೆಯಾ? ಈಉತ್ತರಕ್ಕೆ ಸಹಿ ಹಾಕುವ ಮುನ್ನ ಸಚಿವರು ಒಮ್ಮೆ ನೋಡಬೇಕಿತ್ತು~ ಎಂದು ಸಲಹೆ ನೀಡಿದರು.
`ಅಧಿವೇಶನ ಮುಗಿದ ನಂತರ ನಾವು ಕೊಡಗಿಗೇ ಬರುತ್ತೇವೆ. ಸ್ಥಳೀಯರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಕಾಡಾನೆ ಹಾವಳಿಯಿಂದ ನಾಶವಾದ ಬೆಳೆಗೆ ಮಾರುಕಟ್ಟೆ ಬೆಲೆ ನೀಡುವ ನಿರ್ಧಾರ ಕೈಗೊಂಡಿದ್ದೇವೆ~ ಎಂದು ಸಚಿವರು ಸಮಜಾಯಿಷಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.