ADVERTISEMENT

ರಸ್ತೆ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 20:04 IST
Last Updated 20 ಏಪ್ರಿಲ್ 2013, 20:04 IST

ಹೊಸಕೋಟೆ: ಹೊಸಕೋಟೆ ಬಳಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿದ್ದಾರೆ.
ಮಾಲೂರು ರಸ್ತೆಯ ಕರಿಬೀರನ ಹೊಸಹಳ್ಳಿ ಬಳಿ ಬೈಕ್ ಹಾಗೂ ಕಾರಿನ ನಡೆದ ಅಪಘಾತದಲ್ಲಿ ಬೈಕ್ ಸವಾರ ಡಿ.ಶೆಟ್ಟಿಹಳ್ಳಿಯ ಮಂಜುನಾಥ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ನಿಂಬೆಕಾಯಿಪುರದ ಹರ್ಷವರ್ಧನ ಎಂಬಾತನ ಕಾಲು ಮೂಳೆ ಮುರಿದಿದ್ದು ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೋಲಾರ ರಸ್ತೆಯ ಅಲಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿ ಹೊಡೆದ ಕಾರಣ ತೀವ್ರ ಗಾಯಗೊಂಡ ಬೈಕ್ ಸವಾರ ಮೈಲಾಪುರದ ಮುನಿರಾಜು (40) ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಎನ್.ವೆಂಕಟೇಶ್ ಅವರಿಗೂ ಗಾಯಗಳಾಗಿವೆ. ಗಾರೆ ವೃತ್ತಿ ಮಾಡುತ್ತಿದ್ದ ಮುನಿರಾಜು ಹೊಸಕೋಟೆಯಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹೋಗುತ್ತಿದ್ದರು. ಮುಂದೆ ಹೋಗುತ್ತಿದ್ದ ಲಾರಿ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಬಲಕ್ಕೆ ಬಂದಾಗ ಹಿಂಭಾಗದಲ್ಲಿ ಬರುತ್ತಿದ್ದ ಬೈಕ್ ಲಾರಿಗೆ ಡಿಕ್ಕಿ ಹೊಡೆಯಿತು. ಹೊಸಕೋಟೆ ಪೊಲೀಸರು ಎರಡೂ ಪ್ರಕರಣ ದಾಖಲಿಸಿದ್ದಾರೆ.

ಆತ್ಮಹತ್ಯೆ: ಕ್ರಿಮಿನಾಶಕ ಸೇವಿಸಿ ರಾಮಮೂರ್ತಿ ನಗರದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾರೆ. ಕಣೇಕಲ್ ಗ್ರಾಮದ ಮಮತಾ (27) ಮೃತಪಟ್ಟವರು. 11 ವರ್ಷದ ಕೆಳಗೆ ಮಂಜುನಾಥ ಎಂಬುವವರ ಜೊತೆ ಆಕೆಯ ವಿವಾಹವಾಗಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.