ಬೆಂಗಳೂರು: ‘ನಾನು ಯಾರ ಮೇ ದಬ್ಬಾಳಿಕೆ ಮಾಡಿಲ್ಲ. ರಾಜಕೀಯವಾಗಿ ನನ್ನ ಹೆಸರು ಕೆಡಿಸಲು ಶ್ರೀಧರ್ ವೆಂಕಟರಾವ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಬೆಂಗಳೂರು ಜಿಲ್ಲಾ ಪಂಚಾಯಿತಿಯ ಕಗ್ಗಲೀಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಕೆ.ಎಸ್.ಪರ್ವೀಜ್ ಹೇಳಿದರು.
‘ಪ್ರಜಾವಾಣಿ’ಯಲ್ಲಿ ಭಾನುವಾರ ಪ್ರಕಟಗೊಂಡ ‘ಜಿ.ಪಂ ಕಾಂಗ್ರೆಸ್ ಸದಸ್ಯರ ದಬ್ಬಾಳಿಕೆ’ ವರದಿಗೆ ಪ್ರತಿಕ್ರಿಯಿಸಿರುವ ಅವರು, ‘ಕಗ್ಗಲೀಪುರದಲ್ಲಿ ಕಾಂಗ್ರೆಸ್ ಬಲಶಾಲಿಯಾಗಿದೆ. ಅದನ್ನು ಸಹಿಸದ ಎದುರಾಳಿ ಪಕ್ಷದವರು ಶ್ರೀಧರ್ ಅವರನ್ನು ಬಳಸಿಕೊಂಡು, ನನ್ನನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ. ನ್ಯಾಯದ ಮಾರ್ಗದಲ್ಲಿ ಸಾಗುತ್ತಿರುವ ನಾನು, ಇದಕ್ಕೆಲ್ಲ ಹೆದರುವುದಿಲ್ಲ’ ಎಂದರು.
‘ಗ್ರಾಮದ ಸರ್ವೆ ನಂ. 158/2 ಹಾಗೂ 161/2ರಲ್ಲಿರುವ ಜಮೀನನ್ನು ಮೂಲ ಮಾಲೀಕರಾದ ಹನುಮಯ್ಯನವರಿಂದ ಖರೀದಿಸಿದ್ದೇನೆ. ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ಈ ಜಮೀನಿನ ಪಕ್ಕದಲ್ಲೇ ಶ್ರೀಧರ್ ಅವರ ಜಮೀನಿದೆ. ನಾನು ಖರೀದಿಸಿರುವ ಜಮೀನನ್ನು ತಮ್ಮ ತಾಯಿ ಪಾರ್ವತಿ ಖರೀದಿಸಿದ್ದಾರೆ ಎಂದು ವಾದಿಸುತ್ತಿದ್ದಾರೆ. ಅವರೇ ನನ್ನ ಜಾಗಕ್ಕೆ ನುಗ್ಗಿ ನಿತ್ಯವೂ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.
‘ಜಮೀನು ವಿವಾದ ಸಂಬಂಧ 2012ರಲ್ಲಿ ವಿಚಾರಣೆ ನಡೆಸಿದ್ದ ಉಪತಹಶೀಲ್ದಾರ್ ನನ್ನ ಪರ ಆದೇಶ ನೀಡಿದ್ದಾರೆ. ಅದನ್ನು ಪ್ರಶ್ನಿಸಿದ್ದ ಶ್ರೀಧರ್ ,ಉಪವಿಭಾಗಾಧಿಕಾರಿ, ನಂತರ ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಅಲ್ಲೆಲ್ಲ ನನ್ನ ಪರವೇ ಆದೇಶ ಬಂದಿದೆ’ ಎಂದರು.
‘ನನ್ನ ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸಿದ್ದ ಹಾಗೂ ಜೀವ ಬೆದರಿಕೆ ಹಾಕಿದ್ದ ಶ್ರೀಧರ್ ವಿರುದ್ಧವೂ 2017ರ ಫೆಬ್ರುವರಿ 7ರಂದು ಕಗ್ಗಲೀಪುರದಲ್ಲಿ ಎಫ್ಐಆರ್ ದಾಖಲಾಗಿದೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.
**
ರಾಮನಗರ ಡಿವೈಎಸ್ಪಿ ತಮ್ಮಯ್ಯ ಕುಮ್ಮಕ್ಕಿನಿಂದಾಗಿ 2016ರ ಘಟನೆ ಬಗ್ಗೆ ನನ್ನ ವಿರುದ್ಧ ಈಗ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತೇನೆ
– ಕೆ.ಎಸ್.ಪರ್ವೀಜ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.