ಬೆಂಗಳೂರು: `ಕಾನೂನು ಚೌಕಟ್ಟು ಮೀರಿ ವಿವಿಯ ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ಅವರ ಅವಧಿ ವಿಸ್ತರಿಸಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕ್ರಮ ಖಂಡನೀಯ' ಎಂದು ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಕಿಡಿಕಾರಿದರು.
`ಸೇವಾಜೇಷ್ಠತೆಯ ಆಧಾರದಲ್ಲಿ ವಿಜ್ಞಾನ ವಿಭಾಗದ ಡೀನ್ ಡಾ.ಮೋಹನ್ ಕುಮಾರ್ ಹಂಗಾಮಿ ಕುಲಪತಿಯಾಗಿ ನೇಮಕಗೊಳ್ಳಬೇಕಿತ್ತು. ಅಲ್ಲದೆ ರಂಗಸ್ವಾಮಿ ಅವರ ಡೀನ್ ಅವಧಿ ಡಿಸೆಂಬರ್ 21ಕ್ಕೆ ಕೊನೆಗೊಂಡಿತ್ತು. ಪ್ರಾಧ್ಯಾಪಕರಾಗಿರುವ ರಂಗಸ್ವಾಮಿ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ' ಎಂದು ಅವರು ಅಭಿಪ್ರಾಯಪಟ್ಟರು.
`ವಿವಿ ಕಾಯ್ದೆಯ ಪ್ರಕಾರ ನೂತನ ಕುಲಪತಿ ನೇಮಕವಾಗುವವರೆಗೆ ರಾಜ್ಯಪಾಲರು ಹಂಗಾಮಿ ಕುಲಪತಿಯನ್ನಾಗಿ ಹಿರಿಯ ಡೀನ್ ಅವರನ್ನು ಹಿರಿತನಕ್ಕೆ ಮತ್ತು ಅವಧಿಗನುಗುಣವಾಗಿ ಆದೇಶ ಹೊರಡಿಸುವುದು ಕಾನೂನಿನ ಕ್ರಮ. ಆದರೆ, ರಾಜ್ಯಪಾಲರು ಇದನ್ನು ಗಾಳಿಗೆ ತೂರಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ' ಎಂದರು.
`ಹಂಗಾಮಿ ಕುಲಪತಿ ಅವರನ್ನು ಇದೇ 21ರ ಸಂಜೆ 5 ಗಂಟೆಯೊಳಗೆ ನೇಮಕ ಮಾಡಬೇಕಿತ್ತು. ಆದರೆ, ನೇಮಕವಾದುದು ಡಿಸೆಂಬರ್ 22ರ ಮಧ್ಯಾಹ್ನ 12 ಗಂಟೆಗೆ. ಈ ನಡುವಿನ ಅವಧಿಯಲ್ಲೂ ರಂಗಸ್ವಾಮಿ ಹುದ್ದೆಯಲ್ಲಿ ಮುಂದುವರಿದಿರುವುದು ಖಂಡನೀಯ' ಎಂದು ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.