ಕೃಷ್ಣರಾಜಪುರ: ರಾಮಮೂರ್ತಿನಗರ ಮುಖ್ಯ ರಸ್ತೆಗೆ ಸಂಪರ್ಕಿಸುವ ಕಲ್ಕೆರೆ ಮಾರ್ಗದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಒಟ್ಟು 12 ಅಡ್ಡ ರಸ್ತೆಗಳಿವೆ. ಆದರೆ, ಇತ್ತೀಚೆಗೆ 8ನೇ ಅಡ್ಡ (ಬಿಜೆಪಿ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ಅವರ ನಿವಾಸ) ರಸ್ತೆ ಮಾತ್ರ ರಾತ್ರೋರಾತ್ರಿ ಡಾಂಬರೀಕರಣಗೊಂಡಿರುವುದು ಇತರೆ ಬಡಾವಣೆಗಳ ನಿವಾಸಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಹುತೇಕ ರಸ್ತೆಗಳು ದುರಸ್ತಿ ಕಾಣದೆ ತಗ್ಗು ದಿಣ್ಣೆಗಳಿಂದ ಕೂಡಿದ್ದು ಒಂದಲ್ಲಾ ಒಂದು ರೀತಿಯಲ್ಲಿ ಅವ್ಯವಸ್ಥೆಯ ಆಗರವಾಗಿದ್ದರೆ, 8ನೇ ಅಡ್ಡ ರಸ್ತೆಯನ್ನು ಮಾತ್ರ ಡಾಂಬರೀಕರಣಗೊಳಿಸಿರುವುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.
`ನಾವು ಓಡಾಡುವ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಜತೆಗೆ ಬೀದಿ ದೀಪವೂ ಇಲ್ಲ. ವಿದ್ಯುತ್ ಕಂಬಗಳೂ ಇಲ್ಲ . ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾವು ವಾಸ ಮಾಡುತ್ತಿದ್ದು 8ನೇ ಅಡ್ಡ ರಸ್ತೆ ಡಾಂಬರೀಕರಣಗೊಂಡಿರುವುದು ತಾರತಮ್ಯ~ ಎಂದು ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಬೇಸರ ವ್ಯಕ್ತಪಡಿಸಿದರು.
`ನಮ್ಮ ಬಡಾವಣೆ ಕೂಡ ಅಭಿವೃದ್ಧಿಯಾಗಬಹುದು ಎಂದು ನಂಬಿದ್ದೆವು. ಬಡಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ನಿವಾಸಿಗಳಿದ್ದು ಮೂಲ ಸೌಕರ್ಯ ಇಲ್ಲದೆ ವಾಸಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಕಾರ್ಯದರ್ಶಿಗಳು ನೆಲೆಸಿರುವ ರಸ್ತೆ ಮಾತ್ರ ಅಭಿವೃದ್ಧಿಗೊಂಡು ಮಿಕ್ಕೆಲ್ಲಾ ಬಡಾವಣೆಗಳುಯಥಾಸ್ಥಿತಿಯಲ್ಲಿವೆ~ ಎಂದು ಹೆಸರು ಬಹರಂಗಪಡಿಸಲು ಇಚ್ಛಿಸದ ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.