ಬೆಂಗಳೂರು: ಈ ಹಿಂದೆ ಕೊಂಕಣ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ಕೆಲಸ ಮಾಡಿ, ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಜಿನಿಯರ್ಗಳು ನಗರದಲ್ಲಿ ಒಂದೆಡೆ ಸೇರಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಕೊಂಕಣ ರೈಲ್ವೆ ಮಾರ್ಗ ನಿರ್ಮಿಸುವಾಗ ಎದುರಾದ ಸವಾಲುಗಳನ್ನು ನೆನೆದ ಎಂಜಿನಿಯರ್ಗಳು, ಅವುಗಳನ್ನು ಮೆಟ್ಟಿನಿಂತು ರೈಲು ಓಡಾಡುವಂತೆ ಮಾಡಿದ ಸಾಧಕರು ನಾವು ಎಂದು ಹೆಮ್ಮೆಪಟ್ಟರು. ತಮ್ಮ ಹೊಸ ಜವಾಬ್ದಾರಿ, ಕೆಲಸದ ಸ್ವರೂಪದ ಕುರಿತು ಮಾಹಿತಿ ಹಂಚಿಕೊಂಡರು. ಬಹುತೇಕ ಎಂಜಿನಿಯರ್ಗಳು ಸದ್ಯ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (ಬಿಎಂಆರ್ಸಿಎಲ್)ದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರು ಬಿಎಂಆರ್ಸಿಎಲ್ಗೆ ಸಲಹೆಗಾರರಾಗಿದ್ದಾರೆ.
ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್, ಜಿಎಂಆರ್, ಗೋದ್ರೇಜ್ ಪ್ರಾಪರ್ಟೀಸ್, ಎನ್ಸಿಸಿ, ಮೈಕೊ ಬಾಷ್ ಮತ್ತಿತರ ಕಂಪೆನಿಗಳಲ್ಲಿ ಕೆಲವರು ಕೆಲಸದಲ್ಲಿದ್ದಾರೆ.
ಸೋಮಾ ಎಂಟರ್ಪ್ರೈಸಿಸ್ನ ರೈಲ್ವೆ ವಿಭಾಗದ ಮುಖ್ಯಸ್ಥ ರಿಚರ್ಡ್ಸನ್ ಅಸಿರ್, ಬಿಎಂಆರ್ಸಿಎಲ್ನ ಮುಖ್ಯ ಎಂಜಿನಿಯರ್ಗಳಾದ ಮಹದೇವಸ್ವಾಮಿ ಮತ್ತು ಹೆಗ್ಗಾರಡ್ಡಿ, ಜಿಎಂಆರ್ನ ಉಪಾಧ್ಯಕ್ಷ ಲಕ್ಷ್ಮಿಕಾಂತ ನಾಯಕ್, ಮೈಕೊ ಬಾಷ್ನ ಯೋಜನಾ ಮುಖ್ಯಸ್ಥ ಚಂದ್ರಮೌಳಿ, ಗೋದ್ರೇಜ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಹೇಮಾಮಾಲಿನಿ ಸೇರಿದಂತೆ ಹಲವರು ಈ ಹಿಂದೆ ಕೊಂಕಣ ರೈಲ್ವೆ ಯೋಜನೆಯಲ್ಲಿದ್ದರು.
`ಈ ಎಂಜಿನಿಯರ್ಗಳು ನಿರ್ಮಾಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ತಮ್ಮ ಸಂಸ್ಥೆಗಳಿಗೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ' ಎಂದು ಸಭೆಯಲ್ಲಿ ರಿಚರ್ಡ್ಸನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.