ADVERTISEMENT

ವಸ್ತುವಿಷಯವಿದ್ದರೆ ಸಿನಿಮಾ ಓಡುತ್ತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿದರು. ಪವನ್‌ ಕುಮಾರ್ (ಎಡದಿಂದ), ಚಿತ್ರದ ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಇದ್ದರು –ಪ್ರಜಾವಾಣಿ ಚಿತ್ರ
ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿದರು. ಪವನ್‌ ಕುಮಾರ್ (ಎಡದಿಂದ), ಚಿತ್ರದ ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಸ್ತುವಿಷಯ ಚೆನ್ನಾಗಿದ್ದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಪ್ರದರ್ಶನ ಕಾಣುತ್ತದೆ’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಕರ್ನಾಟಕ ಚಲನಚಿತ್ರಅಕಾಡೆಮಿಯು ನಗರದ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಮಂಗಳವಾರ ಆಯೋಜಿಸಿದ್ದ ‘ಒಂದು ಮೊಟ್ಟೆಯ ಕಥೆ: ಚಿತ್ರ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಮೆರಿಕಾ–ಅಮೆರಿಕಾ ಸಿನಿಮಾವನ್ನು ಸಣ್ಣ ಚಿತ್ರಮಂದಿರದಲ್ಲಿ ಮೊದಲು ಬಿಡುಗಡೆ ಮಾಡಿದೆ. ಅದು ಬಹಳ ದಿನ ಪ್ರದರ್ಶನ ಕಾಣುವುದಿಲ್ಲ ಎಂದು ಕೆಲವರು ಹೇಳಿದ್ದರು. ವಸ್ತುವಿಷಯದಿಂದಾಗಿಯೇ ಅದು ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತು’ ಎಂದು ನೆನಪು ಹಂಚಿಕೊಂಡರು.

ADVERTISEMENT

ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ‘ಹಿಂದೆ ಅತ್ಯುತ್ತಮ ಸಿನಿಮಾ ನಿರ್ಮಿಸುವ ಸಂಸ್ಥೆಗಳಿದ್ದವು. ಇಂದು, ಪವನ್‌ ಕುಮಾರ್‌ ಅಂತವರು ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕಿದೆ’ ಎಂದರು.

‘ಜನರ ಬಾಯಿಮಾತಿನ ಪ್ರಚಾರದಿಂದ ಸಿನಿಮಾಗಳು ಯಶಸ್ವಿಯಾಗುತ್ತಿವೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಂದಾಗಲೇ ಕನ್ನಡ ಚಿತ್ರೋದ್ಯಮ ಬೆಳೆಯುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದರು.

ಚಿತ್ರನಿರ್ಮಾಪಕ ಪವನ್‌ ಕುಮಾರ್‌, ‘ಚಿತ್ರದ ಕಥಾವಸ್ತುವಿನ ಮೇಲೆ ಆತ್ಮವಿಶ್ವಾಸವಿತ್ತು. ಚಿತ್ರ ಬಿಡುಗಡೆ ಮುನ್ನ, ಜನ ಇಷ್ಟಪಡುತ್ತಾರೆಯೇ ಎಂಬ ಅನುಮಾನವಿತ್ತು. ಈಗ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.