ADVERTISEMENT

ವೈದ್ಯರ ಒತ್ತಡದಿಂದ ವಿದ್ವತ್‌ ಬಿಡುಗಡೆ

ಹೈಕೋರ್ಟ್‌ ಮುಂದೆ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:53 IST
Last Updated 8 ಮಾರ್ಚ್ 2018, 19:53 IST
ವಿದ್ವತ್‌
ವಿದ್ವತ್‌   

ಬೆಂಗಳೂರು: ‘ಶಾಸಕ ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ಮತ್ತು ಆತನ ಗೆಳೆಯರಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್‌ ಅವರನ್ನು ವೈದ್ಯರ ತೀವ್ರ ಒತ್ತಡದಿಂದಾಗಿ ಮನೆಗೆ ಕಳುಹಿಸಲಾಗಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶ್ಯಾಂಸುಂದರ್‌ ಗುರುವಾರ ಹೈಕೋರ್ಟ್‌ಗೆ ತಿಳಿಸಿದರು.

‘ವಿದ್ವತ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಫೆಬ್ರುವರಿ 25ರ ಬಳಿಕ ವಿಚಿತ್ರವಾಗಿ ವರ್ತಿಸಲಾರಂಭಿಸಿದರು. ಈ ರೋಗಿಯನ್ನು ಉಪಚರಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿ ಮೇಲೆ ಕೂಗಾಡಲಾರಂಭಿಸಿದರು’ಎಂದು ಅವರಕುಟುಂಬ ಸದಸ್ಯರೊಬ್ಬರು ಹೇಳಿದ್ದಾಗಿ ಶ್ಯಾಂಸುಂದರ್‌ ನ್ಯಾಯಾಲಯಕ್ಕೆ ವಿವರಿಸಿದರು.

ನಲ‍ಪಾಡ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ಜೊತೆ ಲಗತ್ತಿಸಿರುವ ಮೆಡಿಕಲ್‌ ಶೀಟ್‌ನ ಅನುಬಂಧ ನೋಡಿ ಗಾಬರಿಯಾಗಿದ್ದಾಗಿ ಶ್ಯಾಂಸುಂದರ್‌ ಹೇಳಿದರು. ವೈದ್ಯಕೀಯ ದಾಖಲೆಗಳು ಅತ್ಯಂತ ಮಹತ್ವದ್ದಾಗಿದ್ದು ಅವುಗಳನ್ನು ಬಹಿರಂಗಪಡಿಸಲು ಬರುವುದಿಲ್ಲ ಎಂದರು.

ADVERTISEMENT

‘ವಿದ್ವತ್‌ ವೈದ್ಯಕೀಯ ವರದಿಯ  ಐದು ಪುಟಗಳನ್ನು  ಹ್ಯಾರಿಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದರ ಹಿಂದೆ ಸಾಕ್ಷ್ಯ ನಾಶಪಡಿಸುವ ಉದ್ದೇಶವಿದೆ. ವೈದ್ಯಕೀಯ ವರದಿಯನ್ನು ರೋಗಿಗೆ ಅಥವಾ ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಕೊಡಬೇಕು. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೂ ವರದಿಗೆ ಅಧಿಕೃತವಾಗಿ ಮನವಿ ಸಲ್ಲಿಸಬೇಕು’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೇಳಿದರು.

ತನಿಖೆ ಮುಗಿಯುವವರೆಗೂ ಈ ದಾಖಲೆಗಳು ಬೇರೆಯವರಿಗೆ ಸಿಗಬಾರದು ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.