ವೈದ್ಯರ ಮುಷ್ಕರ ಸದ್ಯಕ್ಕಿಲ್ಲ
ಪ್ರಜಾವಾಣಿ ವಾರ್ತೆ Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಬೆಂಗಳೂರು: ವೈದ್ಯರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಜನವರಿ 15ರವರೆಗೆ ಸಮಯ ಕೋರಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಸರ್ಕಾರಿ ವೈದ್ಯರು ಕೈಬಿಟ್ಟಿದ್ದಾರೆ.
ಗುರುವಾರ ರಾತ್ರಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಯಾವಕಾಶ ಕೋರಲಾಗಿದೆ. ವೈದ್ಯಾಧಿಕಾರಿಗಳ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವೈದ್ಯರ ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಉಪ ಮುಖ್ಯಮಂತ್ರಿ ಆರ್. ಅಶೋಕ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ.ರಾಮದಾಸ್ ಮತ್ತು ಕಾನೂನು ಸಚಿವ ಎಸ್.ಸುರೇಶಕುಮಾರ್ ಅವರು ಸಮಿತಿಯ ಇತರ ಸದಸ್ಯರು.
ಈ ಸಮಿತಿ ಜನವರಿ 15ರೊಳಗೆ ವೈದ್ಯರ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಹೀಗಾಗಿ ಅಲ್ಲಿಯವರೆಗೂ ಮುಷ್ಕರ ಮುಂದೂಡಬೇಕು ಎಂದು ಮುಖ್ಯಮಂತ್ರಿ ಕೋರಿದರು. ಈ ಕಾರಣಕ್ಕೆ ಉದ್ದೇಶಿತ ಮುಷ್ಕರವನ್ನು ಜ.15ರವರೆಗೆ ಮುಂದೂಡಲಾಗಿದೆ. ಆ ಬಳಿಕವೂ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಆರಂಭಿಸಲಾಗುವುದು ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಶೈಲಕುಮಾರ್ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.