ADVERTISEMENT

`ಶೈಕ್ಷಣಿಕ ಆಡಳಿತ ವ್ಯವಸ್ಥೆಯಲ್ಲಿ ವಿಳಂಬ ನೀತಿ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 20:37 IST
Last Updated 20 ಡಿಸೆಂಬರ್ 2012, 20:37 IST

ಬೆಂಗಳೂರು: `ಶೈಕ್ಷಣಿಕ ಆಡಳಿತ ವ್ಯವಸ್ಥೆಯಲ್ಲಿನ ವಿಳಂಬ ನೀತಿಯಿಂದ ಶಿಕ್ಷಕರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ' ಎಂದು ಶಿಕ್ಷಣ ತಜ್ಞ ಜಿ.ಅಚ್ಚುತರಾವ್ ಅವರು ಹೇಳಿದರು.

 
ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘವು ನಗರದಲ್ಲಿ ಗುರುವಾರ ಏರ್ಪಡಿಸಿದ್ದ `ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ' ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಆಡಳಿತ ವ್ಯವಸ್ಥೆಯಲ್ಲಿನ ವಿಫಲತೆಯಿಂದ ಶಿಕ್ಷಕರು ಮಾನಸಿಕ ಹಿಂಸೆಯನ್ನು ಅನುಭವಿಸುವಂತಾಗಿದೆ. ಇದರಿಂದ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ' ಎಂದರು.
 
`ಶಿಕ್ಷಕರು ಹೊಸ ಚಿಂತನೆಯನ್ನು ಬೆಳೆಸಿಕೊಂಡು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಂದಿನ ಮಾಹಿತಿ ಯುಗದಲ್ಲಿ ದಿನದಿಂದ ದಿನಕ್ಕೆ ತಿಳವಳಿಕೆ ಮತ್ತು ಅರಿವನ್ನು ಹೆಚ್ಚಿಸಿಕೊಳ್ಳಬೇಕಿದೆ. ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಶಿಕ್ಷಕರು ಮಾಡಬೇಕಾಗಿದೆ' ಎಂದರು.
 
`ಇಂದು ಬದಲಾವಣೆಯನ್ನು ತರಬೇಕಿದ್ದ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದೆ. ಹಣ ಇರುವವರಿಗೆ ಮಾತ್ರ ಶಿಕ್ಷಣ ಎಂಬುದಾಗಿದೆ. ಸುಧಾರಣೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಬೇಕಿದ್ದ ಶಿಕ್ಷಣಕ್ಕೆ ಸಿಗಬೇಕಾದ ಮಾನ್ಯತೆ ಇಂದು ದೊರೆಯುತ್ತಿಲ್ಲ' ಎಂದು ಅವರು ಇದೇ ವೇಳೆ ಹೇಳಿದರು.
 ರಾಜ್ಯದ ಅನೇಕ ಜಿಲ್ಲೆಗಳಿಂದ ಬಂದಿದ್ದವರಿಗೆ ತಮ್ಮ ಬೇಡಿಕೆಗಳನ್ನು ಆಲಿಸಲು ಬರಬೇಕಿದ್ದ ಜನಪ್ರತಿನಿಧಿಗಳು ಬರದೇ ಅಲ್ಲಿದ್ದವರ ಮುಖದಲ್ಲಿ ಕೊಂಚ ಅಸಮಾಧಾನ ಕಂಡು ಬರುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.