ADVERTISEMENT

ಸಂಧಾನಕ್ಕೆ ಕರೆದು ಸ್ನೇಹಿತನ ಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:24 IST
Last Updated 12 ಏಪ್ರಿಲ್ 2018, 19:24 IST

ಬೆಂಗಳೂರು: ಸಣ್ಣಕ್ಕಿಬಯಲು ಸಮೀಪದ ತೋಟದ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಕೋಟೇಶ್ವರ್ ರಾವ್‌ (21) ಎಂಬಾತನನ್ನು ಆತನ ಸ್ನೇಹಿತನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾನೆ.

‘ಕೆಂಗೇರಿಯ ಕೋಟೇಶ್ವರ್, ಕತ್ರಿಗುಪ್ಪೆ ನಿವಾಸಿಯಾದ ತನ್ನ ಸ್ನೇಹಿತ ಸುರೇಶ್ ಜತೆ ಇತ್ತೀಚೆಗೆ ಜಗಳ ಮಾಡಿಕೊಂಡಿದ್ದ. ಸಂಧಾ‌ನದ ನೆಪದಲ್ಲಿ ಬುಧವಾರ ರಾತ್ರಿ ಆತ‌ನನ್ನು ಮೆಜೆಸ್ಟಿಕ್‌ಗೆ ಕರೆಸಿಕೊಂಡ ಸುರೇಶ್, ಸಹಚರರೊಂದಿಗೆ ಸೇರಿ ಆಟೊದಲ್ಲಿ ತೋಟದ ರಸ್ತೆಗೆ ಕರೆದೊಯ್ದು ಕೊಲೆಗೈದಿದ್ದಾನೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

‘ಸುರೇಶ್, ಆಟೊ ಚಾಲಕನಾಗಿದ್ದು ವೇಶ್ಯಾವಾಟಿಕೆ ದಂಧೆಯನ್ನೂ ನಡೆಸುತ್ತಿದ್ದ. ಆತನ ಅಕ್ರಮಗಳಿಗೆ ಕೋಟೇಶ್ವರ್ ನೆರವು ನೀಡುತ್ತಿದ್ದ. ಅದರ ಹಣ ಹಂಚಿಕೊಳ್ಳುವ ವಿಚಾರಕ್ಕೇ ಹಿಂದೆ ಗಲಾಟೆ ಮಾಡಿಕೊಂಡಿದ್ದರು’ ಎಂದು ಮೃತನ ಸ್ನೇಹಿತರು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತನ ಸ್ನೇಹಿತ ಅಂಥೋಣಿಗೆ ಕರೆ ಮಾಡಿದ್ದ ಸುರೇಶ್, ‘ಕೋಟೇಶ್ವರ್‌ನನ್ನು ಕರೆದುಕೊಂಡು ಬಾ. ದ್ವೇಷ ಮರೆತು ಇಬ್ಬರೂ ರಾಜಿಯಾಗುತ್ತೇವೆ’ ಎಂದಿದ್ದ.

ಆರೋಪಿಗಳು ಬೆಳಿಗ್ಗೆ 6 ಗಂಟೆವರೆಗೂ ಸಂಧಾನದ ಬಗ್ಗೆ ಆತನೊಂದಿಗೆ ಮಾತುಕತೆ ನಡೆಸಿದ್ದಾರೆ. ಮನೆಗೆ ಡ್ರಾಪ್ ಮಾಡುವುದಾಗಿ ಆಟೊದಲ್ಲಿ ಕರೆದುಕೊಂಡುಹೋಗಿ, ಮಾರ್ಗಮಧ್ಯೆ ವಾಹನದಿಂದ ಕೆಳಗಿಳಿಸಿ, ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.