ಬೆಂಗಳೂರು: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್ಎಸ್ಕೆ) ಸಮಾಜದ ವತಿಯಿಂದ ‘ಸಹಸ್ರಾರ್ಜುನ ಜಯಂತ್ಯುತ್ಸವ’ ನಗರದಲ್ಲಿ ಭಾನುವಾರ ಸಂಭ್ರಮದಿಂದ ನಡೆಯಿತು.
ಎಸ್.ಧೋಂಡೂಸಾ ಧರ್ಮಸಂಸ್ಥೆಯ ಟ್ರಸ್ಟಿ ಎಸ್.ಎನ್.ಶ್ರೀನಿವಾಸಮೂರ್ತಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಎಸ್ಎಸ್ಕೆ ಸಹಕಾರಿ ಸಂಘದ ಅಧ್ಯಕ್ಷ ಡಿ.ಗಂಗಾಧರಸಾ, ಸಮುದಾಯದ ಮುಖಂಡರಾದ ಎಸ್.ವಿಠಲ್ ದೊಂಗಡಿ, ಟಿ.ಎಂ.ಮೇರವಾಡೆ ಅವರ ನೇತೃತ್ವದಲ್ಲಿ ಸಹಸ್ರಾರ್ಜುನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ಅಂತ್ಯದಲ್ಲಿ ಸಭಿಕರಿಂದ ಜಯಘೋಷಗಳು ಮೊಳಗಿದವು.
ಈ ವರ್ಷ ಮೃತಪಟ್ಟ ಸಮುದಾಯದ ಮುಖಂಡರಾದ ಎಲ್.ಖೋಡೆ, ಮಹಾವೀರಸಾ, ಎಸ್.ಎಂ.ವೆಂಕಟೇಶ್, ಜಿ.ಡಿ.ಶಂಕರಸಾ, ಗೋಪಾಲಕೃಷ್ಣ ದೊಂಡಾಳೆ ಅವರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು.
ಸಂಘದ ಟ್ರಸ್ಟಿ ಕಬಡೆ ನಾಗೇಂದ್ರಸಾ,‘ಸಮುದಾಯದ ಯುವಜನರು ಉತ್ತಮ ಉದ್ಯಮಿಗಳಾಗಿ ಬೆಳೆಯಲು ಶಿಕ್ಷಣದ ಅಗತ್ಯ ಇದೆ. ಸಮುದಾಯದ ಉದ್ಯಮಿಗಳೆಲ್ಲಾ ಸೇರಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕು’ ಎಂದು ತಿಳಿಸಿದರು.
ಸಮುದಾಯದ ಯುವ ಮುಖಂಡ ಎಸ್.ಅನಂತ್, ‘ಹಿರಿಯರು ನಡೆಸಿಕೊಂಡು ಬಂದಿರುವ ಈ ಜಯಂತಿಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕಿದೆ. ಸಮುದಾಯದ ಎಲ್ಲಾ ಸಂಘ–ಸಂಸ್ಥೆಗಳ ನಡುವೆ ಒಗ್ಗಟ್ಟು ಕಾಪಾಡಿಕೊಳ್ಳಬೇಕಿದೆ’ ಎಂದರು.
ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಮುಖಂಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಗಮನ ಸೆಳೆದ ಸ್ಪರ್ಧೆಗಳು: ಶಾಲಾ–ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಚಿತ್ರರಚನಾ ಸ್ಪರ್ಧೆ, ದೇವರನಾಮ ಹಾಗೂ ಕಾರ್ತವೀರ್ಯಾರ್ಜುನ ಸ್ತೋತ್ರ ಪಠಣ ಸ್ಪರ್ಧೆ, ರಸಪ್ರಶ್ನೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನವಾಗಿ ಸ್ಮರಣಿಕೆಗಳನ್ನು ನೀಡಲಾಯಿತು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಗೆದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.