ಕೃಷ್ಣರಾಜಪುರ: ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕೃಷ್ಣರಾಜಪುರ ಮತ್ತು ಉದಯನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ತಾಲ್ಲೂಕು ಕಚೇರಿ ಎದುರು ಇತ್ತೀಚೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎ.ಕೃಷ್ಣಪ್ಪ, `ರೈತರಿಗೆ ಉಚಿತ ವಿದ್ಯುತ್, ರಸಗೊಬ್ಬರ ಪೂರೈಸಲು ಸಾಧ್ಯವಾಗದ ಸರ್ಕಾರ, ಕಡು ಬಡವರಿಗೆ ಸಮರ್ಪಕ ಪಡಿತರ ಚೀಟಿ ವಿತರಿಸುವಲ್ಲಿಯೂ ವಿಫಲ ವಾಗಿದೆ~ ಎಂದು ಆರೋಪಿಸಿದರು.
ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ, `ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠಕಲಿಸಬೇಕು~ ಎಂದು ಕರೆ ನೀಡಿದರು.
ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್, ಬಿಬಿಎಂಪಿ ಸದಸ್ಯೆ ಕೆ. ಪೂರ್ಣಿಮಾ, ಮುಖಂಡರಾದ ಎಂ.ನಾರಾಯಣ್, ಡಿ.ಎ.ಗೋಪಾಲ್ ಮಾತನಾಡಿದರು.
ಕೃಷ್ಣರಾಜಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಕೆರೆ ಎಸ್.ನಾರಾಯಣಸ್ವಾಮಿ, ಉದಯನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಪ್ರಸಾದರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಪಕ್ಷದ ಒಂಬತ್ತು ವಾರ್ಡ್ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.