ಯಲಹಂಕ:‘ಸರ್ವಜ್ಞನಗರ ಕ್ಷೇತ್ರದಲ್ಲಿ ಪ್ರತಿವರ್ಷ ಸರ್ವಜ್ಞ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₨15 ಲಕ್ಷ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಲಾಗಿದೆ’ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು. ದಂಡುಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟವು ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಯ ಸಹಯೋಗದೊಂದಿಗೆ ಕಮ್ಮನಹಳ್ಳಿಯ ಡಾ.ರಾಜ್ಕುಮಾರ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕವಿ ಸರ್ವಜ್ಞ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಒಕ್ಕೂಟದ ಮನವಿಯಂತೆ ಪ್ರತಿವರ್ಷ ಸರ್ವಜ್ಞ ದಿನಾಚರಣೆಯನ್ನು ನಡೆಸಲು ಅನುದಾನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದು, ಮತ್ತೊಮ್ಮೆ ಅವರೊಂದಿಗೆ ಮಾತುಕತೆ ನಡೆಸಿ, ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಡಾ.ರೋರಿಚ್ ದೇವಿಕಾರಾಣಿ ಎಸ್ಟೇಟ್ನ ಅಧಿಕಾರಿ ಮನು ಬಳಿಗಾರ್, ‘ಜಾತಿ, ವರ್ಗ ಮತ್ತು ಧರ್ಮರಹಿತವಾದ ಸಮಾನ ಸಮಾಜದ ಕಲ್ಪನೆಯ ಕುರಿತು ಸರ್ವಜ್ಞ ಕವಿಯು ಸುಮಾರು 500 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸರ್ಕಾರ ಸರ್ವಜ್ಞನ ಹೆಸರಿನಲ್ಲಿ ಅಂಚೆ ಚೀಟಿಯನ್ನು ಹೊರ ತರಲು ಕ್ರಮಕೈಗೊಳ್ಳಬೇಕ’ ಎಂದರು. ಬಿಬಿಎಂಪಿ ಸದಸ್ಯರಾದ ಎ.ಕೋದಂಡರೆಡ್ಡಿ, ಎಂ.ಸಿ.ಶ್ರೀನಿವಾಸ್, ಆರ್.ರಾಜೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮಾರ್ಕಂಡಪುರಂ ಶ್ರೀನಿವಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.