ಬೆಂಗಳೂರು: ಯಲಹಂಕ ಉಪನಗರದ ಬಳಿ ಇರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕಚೇರಿಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕೊಯ್ದು ಸಾಗಿಸಿರುವ ಘಟನೆ ನಡೆದಿದೆ.
ಸಿಆರ್ಪಿಎಫ್ ಕಚೇರಿ ಆವರಣದಲ್ಲಿ ಸಾಕಷ್ಟು ಗಂಧದ ಮರಗಳು ಬೆಳೆದಿವೆ. ಭಾನುವಾರ ರಾತ್ರಿ ಕಚೇರಿಯ ಆವರಣಕ್ಕೆ ನುಗ್ಗಿರುವ ದುಷ್ಕರ್ಮಿಗಳು ಎಂಟು ಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಈ ಸಂಬಂಧ ಸಿಆರ್ಪಿಎಫ್ ಸಹಾಯಕ ಕಮಾಂಡೆಂಟ್ ಅರುಣ್ಕುಮಾರ್ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಚೇರಿಯ ಸುತ್ತ ಸಾಕಷ್ಟು ಪೊಲೀಸ್ ಭದ್ರತೆ ಇದ್ದರೂ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಅಲ್ಲಿನ ಸಿಬ್ಬಂದಿಯ ನೆರವಿನಿಂದಲೇ ದುಷ್ಕರ್ಮಿಗಳು ಗಂಧದ ಮರಗಳನ್ನು ಕೊಯ್ದು ಸಾಗಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಪತ್ತೆ
ಅತ್ತಿಬೆಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ವಿಚಕ್ಷಣ ದಳ ಸಿಬ್ಬಂದಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅತ್ತಿಬೆಲೆಯ ಪಿಳ್ಳಪ್ಪ ಎಂಬಾತ ತನ್ನ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಯಿತು. ಆತನ ಮನೆಯಿಂದ 14 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ವಿಚಕ್ಷಣ ದಳದ ಇನ್ಸ್ಪೆಕ್ಟರ್ ಎ.ಅನಿಲ್ಕುಮಾರ್ ತಿಳಿಸಿದ್ದಾರೆ.
ಪಿಳ್ಳಪ್ಪ ಮತ್ತು ಆತನ ಮಗ ಗಣೇಶ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅನಿಲ್ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.