ಬೆಂಗಳೂರು: ಕೆ.ಆರ್.ಪುರ ಬಳಿಯ ದೇವಸಂದ್ರ ಮುಖ್ಯರಸ್ತೆಯಲ್ಲಿ ಗುರುವಾರ ತಡರಾತ್ರಿ ಸುರಂಗ ಕೊರೆದಿರುವ ದುಷ್ಕರ್ಮಿಗಳು, ‘ಬಾಲಾಜಿ ಆಭರಣ ಮಳಿಗೆ’ಗೆ ನುಗ್ಗಿ ₹40 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ.
ಮೋಹನ್ಲಾಲ್ ಎಂಬುವರಿಗೆ ಸೇರಿದ್ದ ಮಳಿಗೆಯಲ್ಲಿ ಈ ಕೃತ್ಯ ಎಸಗಲಾಗಿದೆ. ರಾತ್ರಿ 10 ಗಂಟೆಗೆ ಮಳಿಗೆಗೆ ಬೀಗ ಹಾಕಿ ಮಾಲೀಕರು ಮನೆಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ಬಾಗಿಲು ತೆಗೆದಾಗ ಕಳ್ಳತನವಾಗಿದ್ದು ಗೊತ್ತಾಗಿದೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಮೇತ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.
ಚರಂಡಿಯಿಂದ ಪ್ರವೇಶ: ‘ಮಳಿಗೆಗೆ ಹೊಂದಿಕೊಂಡೇ ಚರಂಡಿ ಇದ್ದು, ಅದನ್ನು ಸಿಮೆಂಟ್ ಹಾಗೂ ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ. ಕಲ್ಲಿಗೆ ಸಿಮೆಂಟ್ ಹಾಕಿದ್ದ ಭಾಗದಲ್ಲಿ ರಂಧ್ರ ಮಾಡಿರುವ ನಾಲ್ಕಕ್ಕಿಂತ ಹೆಚ್ಚು ಮಂದಿ ದುಷ್ಕರ್ಮಿಗಳು, ಅಲ್ಲಿಂದಲೇ ಮಳಿಗೆಯ ಮಧ್ಯಭಾಗದವರೆಗೆ 6 ಅಡಿಯಷ್ಟು ಸುರಂಗ ಕೊರೆದು ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಮಳಿಗೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ತಂತಿಗಳನ್ನು ಕಿತ್ತೆಸೆದಿರುವ ಆರೋಪಿಗಳು, ಆ ಕ್ಯಾಮೆರಾಗಳನ್ನು ಸಹ ಹೊತ್ತೊಯ್ದಿದ್ದಾರೆ’ ಎಂದು ವಿವರಿಸಿದರು.
ಸುರಂಗದಲ್ಲಿ ಚೆಲ್ಲಾಡಿರುವ ಆಭರಣ: ‘ಆರೋಪಿಗಳು ಬಳಸಿದ್ದ ಸುರಂಗದಲ್ಲಿ ತಪಾಸಣೆ ನಡೆಸಿದೆವು. ಈ ವೇಳೆ ಸುರಂಗದುದ್ದಕ್ಕೂ ಕೆಲ ಆಭರಣಗಳು ಬಿದ್ದಿದ್ದು ಕಂಡುಬಂದಿದ್ದು, ಕಳ್ಳರು ಅವುಗಳನ್ನು ಬೀಳಿಸಿಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಮಳಿಗೆ ಬಗ್ಗೆ ತಿಳಿದವರೇ ಈ ಕೃತ್ಯ ಎಸಗಿರುವ ಅನುಮಾನವಿದೆ. ಚರಂಡಿ ಸಮೀಪವೇ ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದು, ಅವುಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.