ಬೆಂಗಳೂರು: ವಾಹನವೊಂದಕ್ಕೆ ಕಾರು ಗುದ್ದಿಸಿದ್ದ ವಿಷಯ ಮುಚ್ಚಿಟ್ಟು, ‘ತನ್ನನ್ನು 8 ಮಂದಿ ಸುಲಿಗೆ ಮಾಡಿದ್ದಾರೆ’ ಎಂದು ದೂರು ನೀಡಿದ್ದ ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಸಿನಿಮಾ ನಟ ವಿಕ್ರಮ್ ಕಾರ್ತಿಕ್ಗೆ ಬಸವೇಶ್ವರನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
'ದೂರಿನಲ್ಲಿರುವ ಅಂಶಗಳು ಸುಳ್ಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಗುರುವಾರ (ಮಾ. 22) ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಬರುವಂತೆ ನಟನಿಗೆ ನೋಟಿಸ್ ನೀಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
‘ಸ್ನೇಹಿತನನ್ನು ಮನೆಗೆಬಿಟ್ಟು ಬರುತ್ತಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಆಧಾರ್ ಸಂಖ್ಯೆ, ಗುರುತಿನ ಚೀಟಿ, ಮೊಬೈಲ್, ಲ್ಯಾಪ್ಟಾಪ್ ಹಾಗೂ ಸಿನಿಮಾದ ಹಾರ್ಡ್ಡಿಸ್ಕ್ ಕಸಿದುಕೊಂಡಿದ್ದಾರೆ. ನಂತರ, ನನ್ನದೇ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ವಿಕ್ರಮ್ ತಿಳಿಸಿದ್ದರು.
ಆದರೆ, ಮದ್ಯದ ಅಮಲಿನಲ್ಲಿ ವಿಕ್ರಮ್ರೇ ಶಂಕರಮಠ ಸಿಗ್ನಲ್ ಸಮೀಪ ಇನ್ನೊಂದು ಕಾರಿಗೆ ಗುದ್ದಿ ಅಪಘಾತವನ್ನುಂಟು ಮಾಡಿದ್ದರು. ಜಖಂಗೊಂಡ ಕಾರು ದುರಸ್ತಿ ಮಾಡಿಸುವಂತೆ, ಅದರ ಮಾಲೀಕರು ತಾಕೀತು ಮಾಡಿದ್ದರು. ಆಗ ಕಾರು ಹಾಗೂ ಉಳಿದೆಲ್ಲ ವಸ್ತುಗಳನ್ನು ಒಪ್ಪಿಸಿ ವಿಕ್ರಮ್ ಹೊರಟುಹೋಗಿದ್ದರು ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.