ADVERTISEMENT

ಸುಶೀಲಮ್ಮಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಎಸ್‌.ಜಿ.ಸುಶೀಲಮ್ಮ ಅವರಿಗೆ  ಪ್ರಶಸ್ತಿಯನ್ನು ಡಾ.ಬರಗೂರು ರಾಮಚಂದ್ರಪ್ಪ ಪ್ರದಾನ ಮಾಡಿದರು.  ಕನ್ನಡ ಸಾಹಿತ್ಯ ಪರಿಷತ್‌ ಸಂಯೋಜನಾಧಿಕಾರಿ ಬಿ.ಎನ್‌.ಪರಡ್ಡಿ, ಗೌರವ ಖಜಾಂಚಿ ಪಿ.ಮಲ್ಲಿಕಾರ್ಜುನಪ್ಪ, ಲೇಖಕಿ ಡಾ.ವರದಾ ಶ್ರೀನಿವಾಸ್‌, ಮನು ಬಳಿಗಾರ ಇದ್ದಾರೆ
ಎಸ್‌.ಜಿ.ಸುಶೀಲಮ್ಮ ಅವರಿಗೆ ಪ್ರಶಸ್ತಿಯನ್ನು ಡಾ.ಬರಗೂರು ರಾಮಚಂದ್ರಪ್ಪ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಸಂಯೋಜನಾಧಿಕಾರಿ ಬಿ.ಎನ್‌.ಪರಡ್ಡಿ, ಗೌರವ ಖಜಾಂಚಿ ಪಿ.ಮಲ್ಲಿಕಾರ್ಜುನಪ್ಪ, ಲೇಖಕಿ ಡಾ.ವರದಾ ಶ್ರೀನಿವಾಸ್‌, ಮನು ಬಳಿಗಾರ ಇದ್ದಾರೆ   

ಬೆಂಗಳೂರು: ಹಿರಿಯ ಸಾಮಾಜಿಕ ಹೋರಾಟಗಾರ್ತಿ ಹಾಗೂ ಚೋಳನಾಯಕನಹಳ್ಳಿಯ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನಗರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲಾ ಘಟಕದ ದತ್ತಿ (2008–12) ಸ್ಥಾಪಿಸಿರುವ ಈ ಪ್ರಶಸ್ತಿ ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ  ಒಳಗೊಂಡಿದೆ.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್‌.ಸಿ.ಸುಶೀಲಮ್ಮ, ‘ಇಂದು ಅನೇಕ ಪ್ರಶಸ್ತಿಗಳು ಮಾರಾಟಕ್ಕೆ ಇರುವ ಸಂದರ್ಭದಲ್ಲಿ ಯಾವುದೇ ಅರ್ಜಿ, ಶಿಫಾರಸು ಇಲ್ಲದೆ ಕನ್ನಡ ಸಾಹಿತ್ಯ ಪರಿಷತ್‌ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ನೀಡಿದೆ’ ಎಂದರು.

ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ರಾಜಪ್ರಭುತ್ವದಲ್ಲಿದ್ದುಕೊಂಡೇ ಪ್ರಜಾಪ್ರಭುತ್ವ ಎತ್ತಿಹಿಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್‌. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವೇ ಪ್ರಶಸ್ತಿ ಸ್ಥಾಪಿಸಬೇಕಿತ್ತು. ಆದರೆ, ಆ ಕೊರಗನ್ನು ಸಾಹಿತ್ಯ ಪರಿಷತ್‌ ನೀಗಿಸಿತು’ ಎಂದರು.

‘ಕನ್ನಡ ಶಾಲೆ, ಕನ್ನಡ ಭಾಷೆ ಹಾಗೂ ಕನ್ನಡ ಭಾಷಿಗರನ್ನು ಉಳಿಸಲು ಕಾಲೇಜು ಮತ್ತು ವೃತ್ತಿ ಶಿಕ್ಷಣ ಪ್ರವೇಶ, ಉದ್ಯೋಗ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೊದಲ ಆದ್ಯತೆ ನೀಡುವ ಮಹತ್ವದ ತೀರ್ಮಾನವನ್ನು ಕರ್ನಾಟಕ ಏಕೀಕರಣದ ವಜ್ರಮಹೋತ್ಸವಲ್ಲಿ ಸರ್ಕಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.