ಬೆಂಗಳೂರು: ಎಚ್ಬಿಆರ್ ಲೇಔಟ್ 4ನೇ ಬ್ಲಾಕ್ನಲ್ಲಿರುವ ವಿಬಿಆರ್ ಕಾಲೇಜು ಹಾಸ್ಟೆಲ್ನಲ್ಲಿ ಶನಿವಾರ ಬೆಳಿಗ್ಗೆ ಪ್ರಥಮ ಪಿಯುಸಿ (ಪಿಸಿಎಂಬಿ) ವಿದ್ಯಾರ್ಥಿನಿ ಭವ್ಯಸಿಂಗ್ (17) ಎಂಬಾಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ. ಆದರೆ, ‘ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂಥ ಮನಸ್ಥಿತಿಯವಳಲ್ಲ. ಆಕೆ ಸಾವಿನ ಹಿಂದೆ ಯಾರದ್ದೋ ಕೈವಾಡವಿರುವ ಶಂಕೆ ಇದೆ’ ಎಂದು ಮೃತಳ ತಂದೆ ಜಗನ್ನಾಥ್ ಸಿಂಗ್ ಆರೋಪಿಸಿದ್ದಾರೆ. ಅವರ ದೂರಿನ ಅನ್ವಯ ಹೆಣ್ಣೂರು ಪೊಲೀಸರು ಅನುಮಾನಾಸ್ಪದ ಸಾವು (ಐಪಿಸಿ 174ಸಿ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಜೂನ್ನಲ್ಲಿ ಕಾಲೇಜು ಪ್ರವೇಶ ಪಡೆದಿದ್ದ ಚಿಂತಾಮಣಿ ತಾಲ್ಲೂಕಿನ ಭವ್ಯ, ಕಾಲೇಜಿನ ಪಕ್ಕದಲ್ಲೇ ಇರುವ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಎಂದಿನಂತೆ ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ವಿದ್ಯಾರ್ಥಿನಿಯರೆಲ್ಲ ತಿಂಡಿ ತಿನ್ನಲು ಹಾಸ್ಟೆಲ್ ಕ್ಯಾಂಟಿನ್ಗೆ ತೆರಳುತ್ತಿದ್ದರು. ಈ ವೇಳೆ ವರಾಂಡದಲ್ಲಿ ಭವ್ಯಳ ಶವವನ್ನು ನೋಡಿದ ಅವರು, ಜೋರಾಗಿ ಚೀರಿಕೊಂಡಿದ್ದಾರೆ.
ಅವರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಹಾಸ್ಟೆಲ್ ವಾರ್ಡನ್ ಹಾಗೂ ಭದ್ರತಾ ಸಿಬ್ಬಂದಿ, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ.
‘ಬೆಳಿಗ್ಗೆಯಿಂದಲೂ ಭವ್ಯ ಕಾಣಿಸುತ್ತಿರಲಿಲ್ಲ ಎಂದು ಆಕೆಯ ಕೊಠಡಿಯಲ್ಲಿದ್ದ ವಿದ್ಯಾರ್ಥಿನಿಯರು ಹೇಳಿದ್ದಾರೆ. ಶುಕ್ರವಾರ ತಡರಾತ್ರಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಯಾವ ಕಾರಣಕ್ಕೆ ಇಂಥ ನಿರ್ಧಾರ ತೆಗೆದುಕೊಂಡಳು ಎಂಬುದು ಗೊತ್ತಾಗಿಲ್ಲ. ನಾವು ಸಹ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಕಾಲೇಜಿನ ಆಡಳಿತಾಧಿಕಾರಿ ದೀಪಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.