ಹುಬ್ಬಳ್ಳಿ: ರಾಜಕೀಯ ಪುನರ್ಜನ್ಮ ಬಯಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಕ್ಕಾಗಿ ಹುಬ್ಬಳ್ಳಿಯನ್ನೇ `ಚಿಮ್ಮು ಹಲಗೆ~ಯನ್ನಾಗಿ ಮಾಡಿಕೊಳ್ಳಲು ಬಯಸಿದ್ದಾರೆ. ಇದೇ 11ರ ಶಕ್ತಿ ಪ್ರದರ್ಶನಕ್ಕೆ ಅವರ ಬೆಂಬಲಿಗರು ತಮ್ಮ ಯತ್ನ ಆರಂಭಿಸಿದ್ದಾರೆ.
ಯಡಿಯೂರಪ್ಪ ಅವರ ಪ್ರಬಲ ಬೆಂಬಲಿಗರಾದ ಮಾಜಿ ಶಾಸಕರೊಬ್ಬರು, `ಸಮಾವೇಶಕ್ಕೆ ಈಗಾಗಲೇ ತಯಾರಿ ಆರಂಭಿಸಿದ್ದೇವೆ. ಲಕ್ಷಾಂತರ ಜನರನ್ನು ಸೇರಿಸಿ ನಮ್ಮ ನಾಯಕನ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸುತ್ತೇವೆ~ ಎಂದು ಹೇಳಿದರೆ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ `ಸಮಾವೇಶದ ಸಂಬಂಧ ಅಧಿಕೃತ ಸಂದೇಶ ಬಾರದ ಹೊರತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ತಿಳಿಸುತ್ತಾರೆ. ಜಿಲ್ಲೆಯ ಇತರ ಮುಖಂಡರ ಅಭಿಪ್ರಾಯವೂ ಇದೇ ಆಗಿದೆ.
ಆರ್ಎಸ್ಎಸ್ ಶಿಬಿರ ನಡೆದ ಸ್ಥಳದಲ್ಲೇ ಸಮಾವೇಶ ನಡೆಸುವ ಮೂಲಕ ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನ ನಡೆಸಲು ಬೆಂಬಲಿಗರು ಉತ್ಸುಕರಾಗಿದ್ದಾರೆ. ಆ ಸ್ಥಳ ಅಲಭ್ಯವಾದರೆ ನೆಹರು ಕ್ರೀಡಾಂಗಣದಲ್ಲಿ ಜನ್ಮ ದಿನಾಚರಣೆಗೆ ವೇದಿಕೆ ಸಜ್ಜಾಗಲಿದೆ ಎಂದು ಹೇಳಲಾಗಿದೆ.
ಮುಂಚಿನಿಂದಲೂ ಬಿಎಸ್ವೈ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, `ಸಮಾವೇಶದ ಸಮಗ್ರ ರೂಪ-ರೇಷೆ ಕುರಿತು ನನಗಿನ್ನೂ ಮಾಹಿತಿ ಇಲ್ಲ. ಆದರೆ, ಕಾರ್ಯಕ್ರಮ ನಡೆಸುವ ಕುರಿತಂತೆ ಕೆಲವು ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ~ ಎಂದು ಸ್ಪಷ್ಟಪಡಿಸುತ್ತಾರೆ. `ಸಚಿವ ಜಗದೀಶ ಶೆಟ್ಟರ ಕೂಡ ಈ ವಿಷಯವಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಶೀಘ್ರವೇ ಸಭೆ ನಡೆಸಿ ಸಮಾವೇಶದ ಸ್ವರೂಪ ನಿರ್ಧರಿಸುತ್ತೇವೆ~ ಎನ್ನುತ್ತಾರೆ. `ಈ ವಿಚಾರದಲ್ಲಿ ಯಾರೂ ಪಕ್ಷವನ್ನು ಸಂಪರ್ಕಿಸಿಲ್ಲ. ಪತ್ರಿಕೆಗಳಲ್ಲಿ ಓದಿ ಮಾತ್ರ ಗೊತ್ತು. ಅಧಿಕೃತ ಮಾಹಿತಿ ಬಂದ ಬಳಿಕ ಮುಂದಿನ ವಿಚಾರ~ ಎನ್ನುತ್ತಾರೆ ಸಂಸದ, ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ಜೋಶಿ.
ಈ ವಿಷಯವಾಗಿ ಚರ್ಚಿಸಲು ಬಿಎಸ್ವೈ ಅವರ ಬೀಗರೂ ಆಗಿರುವ ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡ್ರ ಈಗಾಗಲೇ ಬೆಂಗಳೂರಿಗೆ ತೆರಳಿದ್ದಾರೆ. `ನಮ್ಮ ನಾಯಕನ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಆಚರಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಈ ಕುರಿತು ಚರ್ಚಿಸಲು ನಾನು ಬೆಂಗಳೂರಿಗೆ ಬಂದಿದ್ದೇನೆ. ನನಗೆ ಕೊಡುವ ಜವಾಬ್ದಾರಿಯನ್ನು ನಾನು ಹೆಮ್ಮೆಯಿಂದ ನಿಭಾಯಿಸುತ್ತೇನೆ~ ಎಂದು ಹೇಳುತ್ತಾರೆ.
ಸಮಾವೇಶ ಸಂಘಟನೆ ಮುಂಚೂಣಿಯಲ್ಲಿರುವ ಮಾಜಿ ಶಾಸಕರು ಮಾತ್ರ `ಉತ್ತರ ಕರ್ನಾಟಕದ ಹಲವು ಜನ ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಯಡಿಯೂರಪ್ಪ ಅವರನ್ನು ಆಶೀರ್ವದಿಸಲಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ನಾಯಕನಿಗೆ ಬೆಂಬಲ ನೀಡಲು ಉತ್ತರ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಜನ ಹರಿದುಬರಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನು ಆಡುತ್ತಾರೆ.
ಹುಬ್ಬಳ್ಳಿಯಲ್ಲೇ ಏಕೆ?
ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿರ್ದುವುದರಿಂದ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಭಾಗದ ಬಹುತೇಕ ಶಾಸಕರು ಜಗದೀಶ ಶೆಟ್ಟರ ಅವರನ್ನು ಬಿಟ್ಟು ತಾವು ಸೂಚಿಸಿದ ಅಭ್ಯರ್ಥಿಗೇ ಮತ ಹಾಕಿದ್ದರಿಂದ ಈ ಭಾಗದ ಮೇಲೆ ಬಿಎಸ್ವೈ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ. ಜತೆಗೆ ಹುಬ್ಬಳ್ಳಿಗೆ ಬಂದಾಗಲೆಲ್ಲ ಹೆಚ್ಚಿನ ಬೆಂಬಲ ಸಿಗುತ್ತಿರುವುದು ಅವರಲ್ಲಿ ಭರವಸೆ ಮೂಡಿಸಿದೆ ಎನ್ನಲಾಗಿದೆ.
ಈ ಮಧ್ಯೆ ಶೆಟ್ಟರ-ಜೋಶಿ ಜೋಡಿ ಯಾವ ನಿಲುವು ತಾಳುತ್ತದೆ ಎಂಬ ನಿರೀಕ್ಷೆಯಲ್ಲಿರುವ ಬಿಜೆಪಿ ಕಾರ್ಯಕರ್ತರ ಪಡೆ ತಟಸ್ಥವಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.