ADVERTISEMENT

‘ವಾಹನ ಸಂಖ್ಯೆ ನಿಯಂತ್ರಣ ಅಗತ್ಯ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:43 IST
Last Updated 19 ಮಾರ್ಚ್ 2014, 19:43 IST

ಬೆಂಗಳೂರು:  ‘ಸರ್ಕಾರ ಜನಸಂಖ್ಯೆ ನಿಯಂತ್ರ­ಣಕ್ಕೆ ಕ್ರಮ ಕೈಗೊಂಡಿ­ರು­ವಂತೆ, ವಾಹ­ನಗಳ ಸಂಖ್ಯೆ ನಿಯಂತ್ರ­ಣಕ್ಕೂ ಕಾನೂ­ನು ತರಬೇಕು’ ಎಂದು ಸುಪ್ರೀಂ ಕೋರ್ಟ್‌ ನ್ಯಾಯ­ಮೂರ್ತಿ ವಿ.­ಗೋಪಾಲ­ಗೌಡ ಹೇಳಿದರು. ನಗರ ಸಿವಿಲ್ ಕೋರ್ಟ್ ಆವರ­ಣದ ವಕೀ­ಲರ ಸಂಘದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾ­ಗದ ಪ್ರಾದೇ­ಶಿಕ ಸಾರಿಗೆ ಅಧಿ­ಕಾರಿ ಡಾ.ಸಿ.ಟಿ.­ಮೂರ್ತಿ ಅವರ  ‘ಸೇಫ್ ಜರ್ನಿ ಟು ಸ್ಕೂಲ್’ ಕೃತಿ ಬಿಡು­ಗಡೆ ಮಾಡಿ ಅವರು ಮಾತನಾಡಿದರು.

‘ದಿನ ನಿತ್ಯ ಅಮೂಲ್ಯ ಜೀವಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ.  ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕು. ವಾಹನ­ಗಳ ಸಂಖ್ಯೆ ನಿಯಂತ್ರಣದ ಪ್ರಸ್ತಾವ­ವನ್ನು ಅತ್ಯಂತ ಗಂಭೀರವಾಗಿ ಪರಿಗಣಿ­ಸಬೇಕು’ ಎಂದರು. ‘ಮೋಟಾರು ವಾಹನ ಕಾಯ್ದೆ­ಯನ್ನು ಪಾಲಿಸದೆ ಇರುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅವರ ಚಾಲನಾ ಪರವಾನಗಿಯನ್ನೇ ರದ್ದು­­ಗೊಳಿಸಬೇಕು’ ಎಂದು ಹೇಳಿದರು.

‘ಬದ್ಧತೆಯಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕಿದೆ. ರಾಜಕಾರಣಿಗಳು, ಅಧಿ­ಕಾರಿಗಳು,  ವಕೀಲರು, ಸಾಹಿತಿ­ಗಳು, ಮಾಧ್ಯಮದವರು ಒಟ್ಟಾಗಿ ಅಪ­ಘಾತ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು. ‘ಅಪಘಾತದ ನಂತರ ಆಗುವ ಪರಿ­ಣಾಮ ಬಹಳ ಭೀಕರ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ. ಸುರಕ್ಷಿತ ಚಾಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು’ ಎಂದು ನುಡಿದರು.

‘ಸೇಫ್‌ ಜರ್ನಿ ಟು ಸ್ಕೂಲ್‌’ ಪುಸ್ತಕವು ಅನೇಕ ಮಾಹಿತಿಗಳನ್ನು ಒಳಗೊಂಡು ಪೋಷಕರಿಗೆ ಮತ್ತು ಮಕ್ಕಳಿಗೆ ಮಾಹಿತಿ ಪೂರ್ಣವಾಗಿದೆ’ ಎಂದರು. ಸಾರಿಗೆ ಇಲಾಖೆ ಪ್ರಧಾನ ಕಾರ್ಯ­ದರ್ಶಿ ಪಿ.ಎನ್‌. ಶ್ರೀನಿವಾಸಾಚಾರಿ, ‘ಮೋಟಾರು ವಾಹನ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಡಿ.ತಂಗರಾಜ್‌ ಮಾತನಾಡಿ, ‘ರಸ್ತೆ ಸುರಕ್ಷತೆ ಬಗೆಗೆ ಸರ್ಕಾರ ಮತ್ತು ಸಮುದಾಯ ಎರಡೂ ತಮ್ಮ ಹೊಣೆ ನಿಭಾಯಿಸಬೇಕು’ ಎಂದರು. ಪುಸ್ತಕದ ಲೇಖಕ ಹಾಗೂ ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಸಿ.ಟಿ.ಮೂರ್ತಿ, ‘ದೇಶದಾದ್ಯಂತ ರಸ್ತೆ ಅಪಘಾತದಲ್ಲಿ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ.

ಪ್ರತಿ ವರ್ಷ ಚೀನಾದಲ್ಲಿ 80,000, ಆಸ್ಟ್ರೇಲಿಯಾ 1,193, ರಷ್ಯಾದಲ್ಲಿ 28,000 ಜನ ಮೃತಪಟ್ಟರೆ, ನಮ್ಮ ದೇಶದಲ್ಲಿ ಪ್ರತಿವರ್ಷ 1,50,000 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.