ADVERTISEMENT

‘ಸಿದ್ದರಾಮಾಯಣದಿಂದ ‘ನಮೋ’ ಭಾರತದೆಡೆಗೆ’

​ಪ್ರಜಾವಾಣಿ ವಾರ್ತೆ
Published 26 ಮೇ 2014, 20:17 IST
Last Updated 26 ಮೇ 2014, 20:17 IST
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ನಗರದಲ್ಲಿ ಸೋಮವಾರ ಆಯೋಜಿಸಿದ್ದ  ‘ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳು’ ವಿಚಾರಸಂಕಿರಣದಲ್ಲಿ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ವಿದ್ಯಾರ್ಥಿಗಳ  ವಿಮರ್ಶಾ ಲೇಖನ ಪುಸ್ತಕವನ್ನು ಬಿಡುಗಡೆ ಮಾಡಿ, ರಿಜಿಸ್ಟ್ರಾರ್‌ ಪ್ರೊ.ಕೆ.ಕೆ.ಸೀತಮ್ಮ ಅವರಿಗೆ ಹಸ್ತಾಂತರಿಸಿದರು. ಕವಿ ಡಾ.ಸಿದ್ದಲಿಂಗಯ್ಯ, ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ದಾರ್ಥ ಇದ್ದಾರೆ	––ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳು’ ವಿಚಾರಸಂಕಿರಣದಲ್ಲಿ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ವಿದ್ಯಾರ್ಥಿಗಳ ವಿಮರ್ಶಾ ಲೇಖನ ಪುಸ್ತಕವನ್ನು ಬಿಡುಗಡೆ ಮಾಡಿ, ರಿಜಿಸ್ಟ್ರಾರ್‌ ಪ್ರೊ.ಕೆ.ಕೆ.ಸೀತಮ್ಮ ಅವರಿಗೆ ಹಸ್ತಾಂತರಿಸಿದರು. ಕವಿ ಡಾ.ಸಿದ್ದಲಿಂಗಯ್ಯ, ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ದಾರ್ಥ ಇದ್ದಾರೆ ––ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆಲವು ಸಾಹಿತಿಗಳ ಚಿಂತನೆ ಸಿದ್ದ­ರಾಮಾಯಣದಿಂದ ‘ನಮೋ’ ಭಾರತದೆಡೆಗೆ ಹೊರಳುತ್ತಿದೆ. ಚುನಾವಣೆಗೆ ಮುನ್ನ ಮೋದಿ­ಯನ್ನು ವಿರೋಧಿಸುತ್ತಿದ್ದವರು ಈಗ ಮೆತ್ತಗಾಗಿ­ದ್ದಾರೆ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಟೀಕಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯ­ಯನ ಕೇಂದ್ರವು ನಗರದಲ್ಲಿ ಸೋಮವಾರ ಆಯೋ­ಜಿ­ಸಿದ್ದ  ‘ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಸಾಹಿತಿಗಳು ಸಮಾಜ­ದಲ್ಲಿ ಹೆಚ್ಚು ಗೊಂದಲವನ್ನು ಸೃಷ್ಟಿಸು­ತ್ತಾರೆ. ಈಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಬಹುತೇಕ ಕಲಾವಿದರು ತಮ್ಮ ದನಿಯನ್ನು  ಹಿಂದೂ­ಸ್ತಾನಿ ಸಂಗೀತಕ್ಕೆ ಮಾರ್ಪಾಡು ಮಾಡಿ­ಕೊಳ್ಳ­ಬೇಕಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಲೋಕಸಭಾ ಚುನಾವಣೆಯ ಫಲಿತಾಂಶ ಹಲವು ಸ್ಥಿತ್ಯಂತರಗಳನ್ನು ಹುಟ್ಟುಹಾಕಿದೆ. ವಂಶ­ಪಾರಂಪರ್ಯ ಆಡಳಿತಕ್ಕೆ ಮುಡಿಪಾಗಿದ್ದ ಕಾಂಗ್ರೆಸ್‌ ಪಕ್ಷ ನೆಲಕಚ್ಚಿದೆ. ಆದರೆ, ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದ ಕೋಮುವಾದೀಯ ಬಿಜೆಪಿ  ಬಲೆಗೆ ಸಿಲುಕಿದ್ದೇವೆ’ ಎಂದು ವಿಷಾದಿಸಿದರು.

‘ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರ­ಗಳು ಸಾಹಿತ್ಯಿಕ ಚಳವಳಿಗಳನ್ನು ಹುಟ್ಟುಹಾಕುತ್ತವೆ. ಪ್ರಸ್ತುತ  ಸಾಹಿತ್ಯ ವಲಯದಲ್ಲಿ ಚಳವಳಿಗಳು ಪುನ­ಶ್ಚೇತನ­ಗೊಳ್ಳಲು ಸಕಾಲ’ ಎಂದರು.

‘ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ  ಜಾತಿ ಧ್ರುವೀಕರಣ ಹೆಚ್ಚುತ್ತಿದೆ. ಸಾಹಿತ್ಯವೂ ಇದಕ್ಕೆ ಹೊರತಾಗಿ ಇಲ್ಲ. ಕನ್ನಡ ಸಾಹಿತ್ಯ ಚಳವಳಿಗಳು ರೂಪುಗೊಳ್ಳುವುದಕ್ಕೆ ಎದುರಾದ ಸಾಂದರ್ಭಿಕ ಒತ್ತಡಗಳನ್ನು ಅರಿತಾಗ ಮಾತ್ರ ಲೇಖಕರು ಹೆಚ್ಚು ಕ್ರಿಯಾಶೀಲರಾಗಬಹುದು’ ಎಂದು ಹೇಳಿದರು.

ಕವಿ ಡಾ ಸಿದ್ಧಲಿಂಗಯ್ಯ, ‘ವೈಚಾರಿಕ ಮನೋ­ಭಾವ  ಹಾಗೂ ಮೊನಚಾದ ಹಾಸ್ಯವಿರುವ ಬೀಚಿಯ ವಿಡಂಬನಾತ್ಮಕ ಸಾಹಿತ್ಯವನ್ನು ಯುವ­ಜನತೆ ಹೆಚ್ಚು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.‘ದಲಿತ ಹಾಗೂ ಬಂಡಾಯ ಸಾಹಿತ್ಯ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ. ಇದು ಎಲ್ಲ ವರ್ಗದ ದಮನಿತರ ದನಿ’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.