ಬೆಂಗಳೂರು: ‘ಕೆಲವು ಸಾಹಿತಿಗಳ ಚಿಂತನೆ ಸಿದ್ದರಾಮಾಯಣದಿಂದ ‘ನಮೋ’ ಭಾರತದೆಡೆಗೆ ಹೊರಳುತ್ತಿದೆ. ಚುನಾವಣೆಗೆ ಮುನ್ನ ಮೋದಿಯನ್ನು ವಿರೋಧಿಸುತ್ತಿದ್ದವರು ಈಗ ಮೆತ್ತಗಾಗಿದ್ದಾರೆ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಟೀಕಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಸಾಹಿತಿಗಳು ಸಮಾಜದಲ್ಲಿ ಹೆಚ್ಚು ಗೊಂದಲವನ್ನು ಸೃಷ್ಟಿಸುತ್ತಾರೆ. ಈಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಬಹುತೇಕ ಕಲಾವಿದರು ತಮ್ಮ ದನಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಮಾರ್ಪಾಡು ಮಾಡಿಕೊಳ್ಳಬೇಕಿದೆ’ ಎಂದು ಮಾರ್ಮಿಕವಾಗಿ ನುಡಿದರು.
‘ಲೋಕಸಭಾ ಚುನಾವಣೆಯ ಫಲಿತಾಂಶ ಹಲವು ಸ್ಥಿತ್ಯಂತರಗಳನ್ನು ಹುಟ್ಟುಹಾಕಿದೆ. ವಂಶಪಾರಂಪರ್ಯ ಆಡಳಿತಕ್ಕೆ ಮುಡಿಪಾಗಿದ್ದ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಆದರೆ, ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದ ಕೋಮುವಾದೀಯ ಬಿಜೆಪಿ ಬಲೆಗೆ ಸಿಲುಕಿದ್ದೇವೆ’ ಎಂದು ವಿಷಾದಿಸಿದರು.
‘ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳು ಸಾಹಿತ್ಯಿಕ ಚಳವಳಿಗಳನ್ನು ಹುಟ್ಟುಹಾಕುತ್ತವೆ. ಪ್ರಸ್ತುತ ಸಾಹಿತ್ಯ ವಲಯದಲ್ಲಿ ಚಳವಳಿಗಳು ಪುನಶ್ಚೇತನಗೊಳ್ಳಲು ಸಕಾಲ’ ಎಂದರು.
‘ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಜಾತಿ ಧ್ರುವೀಕರಣ ಹೆಚ್ಚುತ್ತಿದೆ. ಸಾಹಿತ್ಯವೂ ಇದಕ್ಕೆ ಹೊರತಾಗಿ ಇಲ್ಲ. ಕನ್ನಡ ಸಾಹಿತ್ಯ ಚಳವಳಿಗಳು ರೂಪುಗೊಳ್ಳುವುದಕ್ಕೆ ಎದುರಾದ ಸಾಂದರ್ಭಿಕ ಒತ್ತಡಗಳನ್ನು ಅರಿತಾಗ ಮಾತ್ರ ಲೇಖಕರು ಹೆಚ್ಚು ಕ್ರಿಯಾಶೀಲರಾಗಬಹುದು’ ಎಂದು ಹೇಳಿದರು.
ಕವಿ ಡಾ ಸಿದ್ಧಲಿಂಗಯ್ಯ, ‘ವೈಚಾರಿಕ ಮನೋಭಾವ ಹಾಗೂ ಮೊನಚಾದ ಹಾಸ್ಯವಿರುವ ಬೀಚಿಯ ವಿಡಂಬನಾತ್ಮಕ ಸಾಹಿತ್ಯವನ್ನು ಯುವಜನತೆ ಹೆಚ್ಚು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.‘ದಲಿತ ಹಾಗೂ ಬಂಡಾಯ ಸಾಹಿತ್ಯ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ. ಇದು ಎಲ್ಲ ವರ್ಗದ ದಮನಿತರ ದನಿ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.