ಬೆಂಗಳೂರು: ‘ರಾಜ್ಯ ಗುತ್ತಿಗೆದಾರರ ಸಂಘವು ಇದೇ 10 ಮತ್ತು 11ರಂದು ಅರಮನೆ ಮೈದಾನದ ಶೀಷಮಹಲ್ನಲ್ಲಿ ಗುತ್ತಿಗೆದಾರರ ಸಮ್ಮೇಳನ ಆಯೋಜಿಸಿದೆ’ ಎಂದು ಸಂಘದ ಅಧ್ಯಕ್ಷ ವಿ. ಕೃಷ್ಣಾರೆಡ್ಡಿ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುತ್ತಿಗೆದಾರರ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. ಸ್ಮರಣ ಸಂಚಿಕೆಯನ್ನು ಸಂಸದ ಎಚ್.ಡಿ. ದೇವೇಗೌಡ ಬಿಡುಗಡೆಗೊಳಿಸುತ್ತಾರೆ’ ಎಂದರು.
‘ಸರ್ಕಾರ ಅನೇಕ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಮೂಲಕ ಗುತ್ತಿಗೆ ನೀಡುತ್ತಿದೆ. ಅವುಗಳು ಹೊರರಾಜ್ಯ ಮತ್ತು ವಿದೇಶಿ ಗುತ್ತಿಗೆದಾರರ ಪಾಲಾಗುತ್ತಿವೆ. ಇದರಿಂದಾಗಿ ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಕಾಮಗಾರಿಯೂ ವಿಳಂಬವಾಗುತ್ತಿದೆ’ ಎಂದರು.
‘ನಿಯಮದ ಪ್ರಕಾರ ಕಾಮಗಾರಿ ಮುಗಿದು 30 ದಿನಗಳೊಳಗೆ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ವಿಳಂಬವಾದರೆ ಬಡ್ಡಿ ಕೊಡಬೇಕೆಂಬ ನಿಯಮವೂ ಇದೆ. ಆದರೆ, ರಾಜ್ಯದಲ್ಲಿ ಇದು ಪಾಲನೆಯಾಗುತ್ತಿಲ್ಲ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.