ADVERTISEMENT

2020ರ ಒಳಗೆ ಎರಡನೇ ಹಂತ ಕಾಮಗಾರಿ ಪೂರ್ಣಗೊಳಿಸಿ

ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:55 IST
Last Updated 15 ಜೂನ್ 2017, 19:55 IST
ಉದ್ಘಾಟನೆಗೆ ಸಜ್ಜಾಗಿರುವ ಬೆಂಗಳೂರಿನ ‘ಸಂಪಿಗೆ ರಸ್ತೆ– ಯಲಚೇನಹಳ್ಳಿ ಮಾರ್ಗ’ದ ಪರಿಶೀಲನೆ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮೆಟ್ರೊ ರೈಲಿನಲ್ಲಿ  ಪ್ರಯಾಣ ಮಾಡಿದರು.  ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಈ ಮಾರ್ಗದ ವಿಶೇಷತೆ ಬಗ್ಗೆ ವಿವರಿಸಿದರು. ಶಾಸಕ ದಿನೇಶ್‌ ಗುಂಡೂರಾವ್‌, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಕಾನೂನು ಸಚಿವ ಟಿ.ಬಿ.ಜಯಚಂದ್ರ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಉದ್ಘಾಟನೆಗೆ ಸಜ್ಜಾಗಿರುವ ಬೆಂಗಳೂರಿನ ‘ಸಂಪಿಗೆ ರಸ್ತೆ– ಯಲಚೇನಹಳ್ಳಿ ಮಾರ್ಗ’ದ ಪರಿಶೀಲನೆ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡಿದರು. ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಈ ಮಾರ್ಗದ ವಿಶೇಷತೆ ಬಗ್ಗೆ ವಿವರಿಸಿದರು. ಶಾಸಕ ದಿನೇಶ್‌ ಗುಂಡೂರಾವ್‌, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಕಾನೂನು ಸಚಿವ ಟಿ.ಬಿ.ಜಯಚಂದ್ರ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತವನ್ನು 2020ರ ಗಡುವಿನ ಒಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮದ  ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಉತ್ತರ –ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದಲ್ಲಿ ಕೆಂಪೇಗೌಡ ನಿಲ್ಡಾಣದಿಂದ–ಆರ್‌.ವಿ. ರಸ್ತೆ ನಿಲ್ದಾಣದವರೆಗೆ  ಗುರುವಾರ ಮೆಟ್ರೊದಲ್ಲಿ ಪ್ರಯಾಣಿಸಿ  ಕಾಮಗಾರಿ ಪರಿಶೀಲಿಸಿದರು. ಮೊದಲ ಹಂತದ ಉದ್ಘಾಟನೆಗೆ ನಡೆದಿರುವ ಪೂರ್ವ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಈ ಮಾರ್ಗದ ನೆಲದಡಿಯಲ್ಲಿರುವ ಚಿಕ್ಕಪೇಟೆ ಹಾಗೂ ಕೆ.ಆರ್‌.ಮಾರುಕಟ್ಟೆ ನಿಲ್ದಾಣಗಳಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವುದನ್ನು ಕಂಡ ಅವರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಎಲ್ಲ  ಕಾಮಗಾರಿಗಳು ಉದ್ಘಾಟನೆಗೆ ಮುನ್ನವೇ ಪೂರ್ಣಗೊಳ್ಳಲಿವೆ ಎಂದು ನಿಗಮದ ಅಧಿಕಾರಿಗಳು ಭರವಸೆ ನೀಡಿದರು.

ADVERTISEMENT

ಪರೀಕ್ಷಾರ್ಥ ಸಂಚಾರ ಸಂಪನ್ನ: ನಾಗಸಂದ್ರ– ಯಲಚೇನಹಳ್ಳಿ ನಡುವಿನ 24 ಕಿ.ಮೀ ಉದ್ದದ ಮಾರ್ಗದಲ್ಲಿ ಅಂತಿಮ ಹಂತದ ಸಿದ್ಧತೆ ಪರಿಶೀಲಿಸುವ ಸಲುವಾಗಿ ನಡೆಸಲಾದ ಪರೀಕ್ಷಾರ್ಥ ಸಂಚಾರ ಗುರುವಾರ ಸಂಪನ್ನಗೊಂಡಿತು. ‘ನಿಲ್ದಾಣದಲ್ಲಿ ರೈಲು ನಿಂತಾಗ ಸರಿಯಾದ ದಿಕ್ಕಿನಲ್ಲಿ ಬಾಗಿಲು ತೆರೆಯುತ್ತದೆಯೋ ಇಲ್ಲವೋ, ನಿಲ್ದಾಣ ಕುರಿತ ಪ್ರಕಟಣೆಯಲ್ಲಿ  ಲೋಪಗಳಿವೆಯೇ ಎಂಬುದನ್ನು  ಪರಿಶೀಲಿಸಿದ್ದೇವೆ.

ನಿಲ್ದಾಣದ ಸಿಬ್ಬಂದಿಯ ಸನ್ನದ್ಧತೆಯನ್ನು ಪರೀಕ್ಷೆಗೊಳಪಡಿಸಿದ್ದೇವೆ. ನಿಲ್ದಾಣದ ಕುರಿತ ಪ್ರಕಟಣೆಗೆ ಸಂಬಂಧಿಸಿದಂತೆ ಕೆಲವು ದೋಷಗಳಿದ್ದವು. ಅವುಗಳನ್ನು ಸರಿಪಡಿಸಿದ್ದೇವೆ’  ಎಂದು ನಿಗಮದ ನಿರ್ದೇಶಕ(ರೋಲಿಂಗ್‌ ಸ್ಟಾಕ್‌, ಎಲೆಕ್ಟ್ರಿಕಲ್‌ ಸಿಗ್ನಲಿಂಗ್‌ ಮತ್ತು ಟೆಲಿಕಮ್ಯುನಿಕೇಷನ್ಸ್‌) ಎನ್‌.ಎಂ.ಧೋಕೆ   ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.