ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) 2016–17ನೇ ಸಾಲಿನಲ್ಲಿ ₹4.57 ಕೋಟಿ ಲಾಭ ಗಳಿಸಿದೆ.
‘ನಿಗಮ ಪ್ರಾರಂಭವಾಗಿ 47 ವರ್ಷಗಳಾಯಿತು. ಇದೇ ಮೊದಲ ಬಾರಿಗೆ ಈ ಪ್ರಮಾಣದ ಲಾಭ ಗಳಿಸಿದೆ. ಪ್ರವಾಸ ಪ್ಯಾಕೇಜ್ ಜೊತೆಗೆ ಸುಸಜ್ಜಿತ ಹೋಟೆಲುಗಳನ್ನು ನಿರ್ವಹಿಸುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಹಿಂದೆ ಶೇ 30ರಷ್ಟು ಕೊಠಡಿಗಳು ಭರ್ತಿಯಾಗುತ್ತಿದ್ದವು. ಈಗ ಆ ಸಂಖ್ಯೆ ಶೇ 43ಕ್ಕೆ ಏರಿಕೆಯಾಗಿರುವುದು ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣ. ಇತ್ತೀಚೆಗಷ್ಟೇ ನಂದಿಬೆಟ್ಟದ ಗಾಂಧಿನಿಲಯದ ಬಳಿ 12 ಕೋಣೆಗಳ ನೂತನ ಹೋಟೆಲ್ ಸೇರಿ ನಿಗಮವು 19 ಹೋಟೆಲುಗಳನ್ನು ನಿರ್ವಹಿಸುತ್ತಿದ್ದು, 24 ಹೋಟೆಲ್ಗಳನ್ನು ದೀರ್ಘಾವಧಿ ಹೊರಗುತ್ತಿಗೆಗೆ ನೀಡಿದೆ’ ಎಂದು ವಿವರಿಸಿದ್ದಾರೆ.
ಈ ವರ್ಷ 21 ವಿವಿಧ ಪ್ರವಾಸ ಪ್ಯಾಕೇಜುಗಳನ್ನು ಆಯೋಜಿಸಲಾಗಿದೆ. ‘ಪುನೀತ ಯಾತ್ರೆ’ಗೆ ಬೇಡಿಕೆ ಹೆಚ್ಚುತ್ತಿದೆ. 20 ಸಾವಿರಕ್ಕೂ ಅಧಿಕ ಮಂದಿ ಈ ಸೌಲಭ್ಯ ಪಡೆದಿದ್ದಾರೆ. ನಿಗಮದ ಸಾರಿಗೆ ವಿಭಾಗದಿಂದಲೂ ಶೇ20ರಷ್ಟು ಆದಾಯ ಹೆಚ್ಚಾಗಿದೆ ಎಂದಿದ್ದಾರೆ.
‘ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಮಾರುಕಟ್ಟೆ ವೃದ್ಧಿಸಿಕೊಳ್ಳಲು ನೆರವಾಗಿದೆ. ಇನ್ನುಮುಂದೆ ಪ್ರತಿವರ್ಷ ಲಾಭ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.