ಬೆಂಗಳೂರು: ‘ಸಿದ್ಧನಹೊಸಹಳ್ಳಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ₹1 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಹೆಸರಘಟ್ಟ ಸಮೀಪದ ದಾಸನಪುರ ಹೋಬಳಿಯ ಸಿದ್ಧನಹೊಸಹಳ್ಳಿಯಲ್ಲಿ ಆಯೋಜಿಸಿದ್ದ ‘ವಿಶೇಷ ಗ್ರಾಮಸಭೆ’ಯಲ್ಲಿ ಅವರು ಮಾತನಾಡಿದರು.
ಈ ಅನುದಾನದ ಪೈಕಿ ₹50 ಲಕ್ಷ ವೆಚ್ಚದಲ್ಲಿ ರಸ್ತೆ ಚರಂಡಿ, ₹14 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ, ₹12 ಲಕ್ಷ ವೆಚ್ಚದಲ್ಲಿ ವ್ಯಾಯಾಮ ಮತ್ತು ಕ್ರೀಡಾಂಗಣ ಅಭಿವೃದ್ಧಿ, ₹3 ಲಕ್ಷ ವೆಚ್ಚದಲ್ಲಿ ಸೌರದೀಪಗಳ ಅಳವಡಿಕೆ, ₹6 ಲಕ್ಷ ವೆಚ್ಚದಲ್ಲಿ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.
ಸಿದ್ಧನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ರಾಜ್, ‘1984ರಿಂದಲೂ ನಮ್ಮ ಗ್ರಾಮವನ್ನು ಹಸಿರು ವಲಯದಲ್ಲೇ ಗುರುತಿಸಲಾಗುತ್ತಿದೆ. ಬಿಡಿಎ ಪ್ರಕಟಿಸಿರುವ ಪರಿಷ್ಕೃತ ಮಹಾಯೋಜನೆ 2031ರಲ್ಲೂ ಹಸಿರು ವಲಯ ಎಂದೇ ನಮೂದಿಸಲಾಗಿದೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ‘ಬಿಡಿಎ ಅವೈಜ್ಞಾನಿಕವಾಗಿ ಪರಿಷ್ಕೃತ ಮಹಾಯೋಜನೆಯನ್ನು ತಯಾರಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಜನವರಿ 24 ಕೊನೇ ದಿನ. ಸಿದ್ಧನಹೊಸಹಳ್ಳಿ ಗ್ರಾಮ ಪಂಚಾಯಿತಿಯನ್ನು ಹಳದಿ ವಲಯವೆಂದು ಘೋಷಿಸುವಂತೆ ಒತ್ತಾಯಿಸಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.