ಬೆಂಗಳೂರು: ನಗರದಲ್ಲಿ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಆಹಾರ ತ್ಯಾಜ್ಯ ಕ್ರಷರ್ ಯಂತ್ರ’ ಅಳವಡಿಕೆ ಕಡ್ಡಾಯ ಮಾಡಲು ಮುಂದಾಗಿರುವ ಬಿಬಿಎಂಪಿಯ ಕ್ರಮವನ್ನು ವಿರೋಧಿಸಿ ‘#ಕಿಚನ್ಪಲ್ವರೈಸರ್ಬೇಡ’ ಎಂಬ ಆನ್ಲೈನ್ ಅಭಿಯಾನ ಆರಂಭಿಸಲಾಗಿದೆ.
ಹೊಸ ಬಡಾವಣೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಮೇಯರ್ ಆರ್.ಸಂಪತ್ ರಾಜ್ ಇತ್ತೀಚೆಗೆ ತಿಳಿಸಿದರು.
ಕ್ರಷರ್ನಲ್ಲಿ ಆಹಾರವನ್ನು ಪುಡಿಪುಡಿ ಮಾಡಲು ಹಾಗೂ ಅದನ್ನು ಒಳಚರಂಡಿಗೆ ಹೋಗುವಂತೆ ಮಾಡಲು ಹೆಚ್ಚಿನ ನೀರು ಬೇಕಾಗುತ್ತದೆ. ಕನಿಷ್ಠ 10–12 ಲೀಟರ್ ನೀರಿನ ಅಗತ್ಯವಿದೆ. ಇಲ್ಲದಿದ್ದರೆ ಆಹಾರ ಪದಾರ್ಥಗಳು ಕ್ರಷರ್ನಲ್ಲೇ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದು ಆನ್ಲೈನ್ ಅಭಿಯಾನ ಆರಂಭಿಸಿರುವ ಕಸ ನಿರ್ವಹಣಾ ತಜ್ಞ ನಾಗೇಶ್ ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಸದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಇದು ಉತ್ತಮಕ್ರಮ ಎಂದು ಪಾಲಿಕೆಯು ಭಾವಿಸಿದಂತಿದೆ. ಆದರೆ, ಈ ವಿಧದ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ (ಎಸ್ಟಿಪಿ) ಇಲ್ಲ ಹಾಗೂ ಅದು ಕಾರ್ಯಸಾಧುವೂ ಅಲ್ಲ. ಕೊಬ್ಬಿನಾಂಶ ಹೊಂದಿದ ಪದಾರ್ಥಗಳಲ್ಲಿ ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಅದು ನೊರೆಯನ್ನು ಸೃಷ್ಟಿ ಮಾಡುತ್ತದೆ. ಅದು ಜಿರಳೆಗಳನ್ನು ಆಕರ್ಷಿಸುತ್ತದೆ. ಇವುಗಳಿಂದ ಕಾಲರಾ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.
ಆಹಾರ ತ್ಯಾಜ್ಯವನ್ನು ನೇರವಾಗಿ ಗೊಬ್ಬರವನ್ನಾಗಿ ಪರಿವರ್ತಿಸುವುದು ಒಳ್ಳೆಯ ಕ್ರಮ. ಸಂಸ್ಕರಣೆಯೂ ಸುಲಭ ಹಾಗೂ ಮಿತವ್ಯಯ ಎಂದರು.
500ಕ್ಕೂ ಹೆಚ್ಚಿನ ಜನರು ಸಹಿ ಮಾಡಿದ ಬಳಿಕ ಅದನ್ನು ಮೇಯರ್ಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.