ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಇಲಾಖೆಯು ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯು ನಗರದಲ್ಲಿ ಆರಂಭವಾಗಿದೆ.
ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಬಿಬಿಎಂಪಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸಲು ಕೇಂದ್ರದ ತಂಡವು ಸಮೀಕ್ಷಾ ಕಾರ್ಯ ಆರಂಭಿಸಿದ್ದು, ಮಾರ್ಚ್ 10ರವರೆಗೆ ನಡೆಯಲಿದೆ.
ತಂಡದ ಸದಸ್ಯರು ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆ, ಆಸ್ಪತ್ರೆ ಹಾಗೂ ಪ್ರಮುಖ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪಾಲಿಕೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.
ನಾಲ್ಕು ವರ್ಷಗಳಿಗೆ ಹೋಲಿಸಿದಾಗ ನಗರವು ಈಗ ಸ್ವಚ್ಛತೆಯಿಂದ ಕೂಡಿದೆಯೇ ಎಂಬುದರ ಕುರಿತು ಸ್ವಯಂ ಪರಿಶೀಲನೆ ನಡೆಸಲಿದ್ದಾರೆ. ಈ ಬಗ್ಗೆ ಪಾಲಿಕೆಯಿಂದ ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ, ಆಗ ನಕಾರಾತ್ಮಕ ಅಂಕ ನೀಡಲಿದ್ದಾರೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಬೇಕಾದರೆ ಜನಾಭಿಪ್ರಾಯ ರೂಪಿಸುವುದು ಮುಖ್ಯ. 1 ಕೋಟಿ ಜನರಿರುವ ನಗರ
ದಲ್ಲಿ ಕನಿಷ್ಠ 3.5 ಲಕ್ಷ ಜನರು ಸ್ವಚ್ಛ ಸರ್ವೇಕ್ಷಣೆಯ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅಭಿಪ್ರಾಯ ತಿಳಿಸಬೇಕು. ಆದರೆ, ಪಾಲಿಕೆಯಿಂದ ಈ ಬಗ್ಗೆ ಸರಿಯಾಗಿ ಅರಿವು ಮೂಡಿಸದ ಕಾರಣ, ಕಡಿಮೆ ಜನರು ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.