ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎರಡು ದಿನಗಳ ಭೇಟಿಗಾಗಿ ಮಂಗಳವಾರ ರಾಜ್ಯಕ್ಕೆ ಬರಲಿದ್ದಾರೆ.
ಸಂಜೆ 4.45ಕ್ಕೆ ಬೆಂಗಳೂರಿಗೆ ಬರಲಿರುವ ಅವರು ಯಲಹಂಕ ಸಮೀಪದ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಮೊದಲ ಹಂತದಲ್ಲಿ ಉತ್ತರ ಕರ್ನಾಟಕ ಹಾಗೂ ಎರಡನೆ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ ಸಂಸದರು, ಶಾಸಕರು ಹಾಗೂ ಜಿಲ್ಲೆಗಳ ಅಧ್ಯಕ್ಷರ ಸಭೆ ನಡೆಸಲಿದ್ದಾರೆ. ಬುಧವಾರ (ಡಿ.10)ರಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಷಾ ಪಾಲ್ಗೊಳ್ಳಲಿದ್ದಾರೆ.
ಪ್ರಮುಖರ ಸಮಿತಿಯ ಸದಸ್ಯರಿಗೆ, ಮೋರ್ಚಾಗಳ ಪ್ರಮುಖರಿಗೆ ನಿರ್ದಿಷ್ಟ ಗುರಿ ನೀಡಿದ್ಧಾರೆ. ತಮ್ಮದೇ ಖಾಸಗಿ ತಂಡಗಳನ್ನು ರಾಜ್ಯದ 224 ಕ್ಷೇತ್ರಗಳಲ್ಲಿ ಬಿಟ್ಟಿರುವ ಷಾ, ಪಕ್ಷದ ಪರಿಸ್ಥಿತಿಯ ಬಗ್ಗೆ ಕರಾರುವಾಕ್ ಮಾಹಿತಿ ಪಡೆದಿದ್ದಾರೆ. ಈ ಎಲ್ಲವನ್ನೂ ಮುಂದಿಟ್ಟು, ಗುರಿ ಸಾಧನೆಯಾಗಿರುವ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಾತ್ರೆಯಲ್ಲಿ ಯಡಿಯೂರಪ್ಪ:
ಷಾ ನಡೆಸಲಿರುವ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಪಾಲ್ಗೊಳ್ಳುವುದಿಲ್ಲ. ಪ್ರಮುಖರ ಸಮಿತಿ ಸಭೆ ಇಲ್ಲದೇ ಇರುವುದರಿಂದ, ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಷಾ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.