ಬೆಂಗಳೂರು: ಗ್ರಾಮೀಣ ಮಟ್ಟದಲ್ಲಿ ವಿಜ್ಞಾನದ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು 4ನೇ ‘ವಿಜ್ಞಾನ ದರ್ಶನ’ ಪ್ರವಾಸ ಕಾರ್ಯಕ್ರಮಕ್ಕೆ ನಗರದಲ್ಲಿ ಗುರುವಾರ ಚಾಲನೆ ನೀಡಿದೆ.
ಹಿಂದುಳಿದ ತಾಲ್ಲೂಕುಗಳ 21 ಶಾಲೆಗಳಿಂದ 185 ವಿದ್ಯಾರ್ಥಿಗಳನ್ನು ಹಾಗೂ 25 ವಿಜ್ಞಾನ ಶಿಕ್ಷಕರನ್ನು ಪ್ರವಾಸಕ್ಕೆ ಕರೆತರಲಾಗಿದೆ.
ಇಸ್ರೊ ಉಪಗ್ರಹ ಮ್ಯೂಸಿಯಂ, ಎಚ್ಎಎಲ್ ಪಾರಂಪರಿಕ ಕೇಂದ್ರ ಹಾಗೂ ಏರೋಸ್ಪೇಸ್ ಮ್ಯೂಸಿಯಂ, ಇಂದಿರಾ ಗಾಂಧಿ ಸಂಗೀತ ಕಾರಂಜಿ, ಲಾಲ್ಬಾಗ್, ನಮ್ಮ ಮೆಟ್ರೊ, ಸರ್.ಎಂ.ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ, ಜವಹರ್ಲಾಲ್ ನೆಹರೂ ತಾರಾಲಯ, ಆಕಾಶವಾಣಿ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಕರೆದೊಯ್ದು ಅಲ್ಲಿನ ವಿಜ್ಞಾನ ಲೋಕದ ಬಗ್ಗೆ ಪರಿಚಯಿಸಲಾಗುತ್ತಿದೆ. ಅವರಿಗೆ ಊಟ, ವಸತಿ ಹಾಗೂ ಬಸ್ ವ್ಯವಸ್ಥೆಯನ್ನು ಮಂಡಳಿ ವತಿಯಿಂದ ಮಾಡಲಾಗಿದೆ.
21 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸರ್.ಸಿ.ವಿ.ರಾಮನ್ ಇ–ಕಲಿಕಾ (ವರ್ಚುವಲ್ ಲ್ಯಾಬ್) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಶಾಲೆಗಳಿಗೆ 20 ಲ್ಯಾಪ್ಟಾಪ್ಗಳನ್ನು ನೀಡಲಾಗಿದೆ ಎಂದು ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.