ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಜಾಬಂದಿಯಾಗಿರುವ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕನ್ನಡ ಕಲಿಕೆ ಪ್ರಾರಂಭಿಸಿದ್ದಾರೆ.
ವಯಸ್ಕರ ಸಾಕ್ಷರತಾ ಕಾರ್ಯಕ್ರಮದಡಿ ಜೈಲಿನಲ್ಲಿ ತರಗತಿಗಳನ್ನು ಆಯೋಜಿಸಲಾಗಿದ್ದು, ಶಶಿಕಲಾ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರತಿದಿನ ಬೆಳಿಗ್ಗೆ ತರಗತಿಯಲ್ಲಿ ಪಾಲ್ಗೊಳ್ಳುತ್ತಿರುವ ಅವರು, ಕನ್ನಡ ಅಕ್ಷರಗಳನ್ನು ಬರೆಯಲು ಕಲಿಯುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಪದಗಳ ಉಚ್ಛಾರಣೆಯಂಥ ಜ್ಞಾನವನ್ನು ನೀಡಲಾಗುತ್ತಿದ. ಕನ್ನಡ ಭಾಷೆಯ ಜತೆಗೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲೂ ಆಸಕ್ತಿ ತೋರುತ್ತಿದ್ದಾರೆ ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ.
ಸದ್ಯ ಪುರುಷರ ಬ್ಯಾರಕ್ನಲ್ಲಿ ಮಾತ್ರ ಗ್ರಂಥಾಲಯವಿದೆ. ಪುಸ್ತಕ ಓದುವ ಹವ್ಯಾಸ ಹೊಂದಿರುವ ಶಶಿಕಲಾ, ಮಹಿಳಾ ಬ್ಯಾರಕ್ನಲ್ಲೂ ಪ್ರತ್ಯೇಕ ಗ್ರಂಥಾಲಯ ತೆರೆಯುವಂತೆ ಜೈಲರ್ಗೆ ಮನವಿ ಮಾಡಿದ್ದಾರೆ.
ಈ ಕೋರಿಕೆಯ ಬೆನ್ನಲ್ಲೇ ಮಹಿಳಾ ಬ್ಯಾರಕ್ಗೆ 91 ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಪೂರೈಸಲು ಒಪ್ಪಿರುವ ಜೈಲರ್, ಪ್ರತ್ಯೇಕ ಗ್ರಂಥಾಲಯದ ಪ್ರಸ್ತಾವವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.