ADVERTISEMENT

ದೇವಸ್ಥಾನದ ಆಭರಣ ಟ್ಯಾಂಕ್‌ನಲ್ಲಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:26 IST
Last Updated 5 ಫೆಬ್ರುವರಿ 2018, 19:26 IST

ಬೆಂಗಳೂರು: 2017ರ ಡಿ.18ರಂದು ಕಳವಾಗಿದ್ದ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆಭರಣಗಳು ಸಮೀಪದ ನೀರಿನ ಟ್ಯಾಂಕ್‌ನಲ್ಲೇ ಪತ್ತೆಯಾಗಿವೆ.

ಈ ಬೆಳವಣಿಗೆಯಿಂದಾಗಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಜಯನಗರ ಪೊಲೀಸರು, ಎಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಟ್ಯಾಂಕ್‌ನಲ್ಲಿ ಎರಡು ಕೆ.ಜಿ ಚಿನ್ನಾಭರಣ ಸಿಕ್ಕಿದ್ದು, ಇನ್ನೂ ಅರ್ಧ ಕೆ.ಜಿ ಚಿನ್ನ ಪತ್ತೆಯಾಗಬೇಕಿದೆ.

ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿ ರಾಘವೇಂದ್ರ ಸ್ವಾಮಿ ದೇವಸ್ಥಾನವಿದೆ. ಒಡವೆ ವಸ್ತ್ರಗಳ ಭದ್ರತೆ ಹಾಗೂ ನಗದು ವಹಿವಾಟನ್ನು ಖಜಾಂಚಿ ಗೋಪಿನಾಥ್ (78) ನಿರ್ವಹಿಸುತ್ತಾರೆ.

ADVERTISEMENT

‘ದೇವಸ್ಥಾನದ ಆಭರಣಗಳನ್ನು ಸೇವಾ ಸಮಿತಿಯ ಕಚೇರಿಯಲ್ಲಿ ಇಡಲಾಗಿತ್ತು. ಡಿ.18ರ ಬೆಳಿಗ್ಗೆ 11.45ರ ಸುಮಾರಿಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ಸಂಜೆ 6 ಗಂಟೆಗೆ ಕಚೇರಿಗೆ ವಾಪಸಾದಾಗ ಬಾಗಿಲು ತೆರೆದಿತ್ತು. ಒಳಗೆ ಹೋಗಿ ಅಲ್ಮೆರಾ ಪರಿಶೀಲಿಸಿದಾಗ ₹ 21 ಸಾವಿರ ನಗದು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವಾಗಿದ್ದವು’ ಎಂದು ಗೋಪಿನಾಥ್ ದೂರು ಕೊಟ್ಟಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸೇವಾ ಸಮಿತಿಯ ಎಲ್ಲ ಸದಸ್ಯರನ್ನೂ ವಿಚಾರಣೆ ನಡೆಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇತ್ತೀಚೆಗೆ ನೀರಿನ ಟ್ಯಾಂಕ್‌ನಲ್ಲಿ ಎರಡು ಕೆ.ಜಿಯಷ್ಟು ಆಭರಣ ಸಿಕ್ಕಿದ್ದಾಗಿ ಸದಸ್ಯರು ಪೊಲೀಸರಿಗೆ ಹೇಳಿದ್ದಾರೆ.

ಹೊರಗಿನವರು ಕೃತ್ಯ ಎಸಗಿದ್ದರೆ, ಅಭರಣಗಳನ್ನು ಟ್ಯಾಂಕ್‌ನಲ್ಲಿ ಎಸೆದು ಹೋಗುತ್ತಿರಲಿಲ್ಲ. ನಾವು ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ ಒಡವೆಗಳು ಪತ್ತೆಯಾಗಿವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಆಡಳಿತ ಮಂಡಳಿ ಸದಸ್ಯರು ತನಿಖೆಗೆ ಸಹಕರಿಸುತ್ತಿಲ್ಲ. ಹಿರಿಯ ನಾಗರಿಕರಾದ ಕಾರಣ ನಾವೂ ತೀವ್ರ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.