ಬೆಂಗಳೂರು: ಮೂಲಸೌಕರ್ಯ ಮತ್ತು ಗುಣಮಟ್ಟದ ಕೊರತೆಯ ಕಾರಣ ಆರು ಎಂ.ಇಡಿ ಕಾಲೇಜುಗಳಿಗೆ ನೀಡಿದ್ದ ಮಾನ್ಯತೆಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್ಸಿಟಿಇ) ರದ್ದುಗೊಳಿಸಿದೆ.
ಸೋಮವಾರ ಮುಕ್ತಾಯಗೊಂಡ ಪರಿಷತ್ತಿನ ದಕ್ಷಿಣ ಪ್ರಾದೇಶಿಕ ಸಮಿತಿಯ ನಾಲ್ಕು ದಿನಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜಯನಗರದ ವಿಜಯಾ ಟೀಚರ್ಸ್ ಕಾಲೇಜು, ಪಟ್ಟೇಗಾರಪಾಳ್ಯದ ಸೆಂಟ್ ಪೌಲ್ಸ್ ಎಂಇಡಿ ಕಾಲೇಜು, ಶ್ರೀಮತಿ ಮೆಹ್ರಾಸ್ ಕಾಲೇಜ್ ಆಫ್ ಎಜುಕೇಷನ್, ಬೆಂಗಳೂರು ಸಿಟಿ ಕಾಲೇಜ್ ಆಫ್ ಎಜುಕೇಷನ್, ಕೆಐಇಟಿ ಕಾಲೇಜ್ ಆಫ್ ಎಜುಕೇಷನ್ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆಯ `ಗೋಲ್ಡ್ ಫೀಲ್ಡ್ ಆಫ್ ಎಜುಕೇಷನ್' ಕಾಲೇಜುಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಹಿಂತೆಗೆದುಕೊಳ್ಳಲಾಗಿದೆ.
`ಬಿಇಡಿ ಮತ್ತು ಎಂಇಡಿ ಕಾಲೇಜುಗಳಿಗೆ ಸಂಬಂಧಿಸಿದಂತೆ ರಚನೆಯಾಗಿದ್ದ ಬೆಂಗಳೂರು ವಿ.ವಿ ಕಾರ್ಯಪಡೆಯ ವರದಿ ಆಧರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕಾಲೇಜುಗಳಿಗೆ ಬೆಂ. ವಿ.ವಿ ಷೋಕಾಸ್ ನೋಟಿಸ್ ನೀಡಿತ್ತು' ಎಂದು ಸಮಿತಿಯ ಸಂಯೋಜಕ ಪಿ.ಶ್ರೀರಾಮನ್ ತಿಳಿಸಿದರು.
`ಎನ್ಸಿಟಿಇ ನಿರ್ಣಯಕ್ಕೆ ವಿ.ವಿ ಬದ್ಧವಾಗಿರಲಿದೆ' ಎಂದು ವಿ.ವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.