ADVERTISEMENT

ಅಪಘಾತದಿಂದ ಬೆಂಕಿ: ಯುವತಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 21:42 IST
Last Updated 22 ಏಪ್ರಿಲ್ 2024, 21:42 IST
   

ಬೆಂಗಳೂರು: ಬೆಂಗಳೂರು– ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಓಮ್ನಿ ವ್ಯಾನ್‌ ನಡುವೆ ಅಪಘಾತ ಸಂಭವಿಸಿದ್ದು, ಓಮ್ನಿ ವ್ಯಾನ್‌ನಲ್ಲಿ ಬೆಂಕಿ ಹೊತ್ತಿಕೊಂಡು ದಿವ್ಯಾ (16) ಎಂಬುವವರು ಸಜೀವ ದಹನವಾಗಿದ್ದಾರೆ.

‘ಮಾದಾವರದಲ್ಲಿರುವ ಟೋಲ್‌ಗೇಟ್‌ ಬಳಿ ಭಾನುವಾರ ರಾತ್ರಿ ಈ ಅವಘಡ ಸಂಭವಿಸಿದೆ. ದಿವ್ಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಸಂಬಂಧಿಕರಾದ ಮಯಾಂಕ್, ಮಂಜುಳಾ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಗೊಂಡಿದ್ದಾರೆ. ಅವರೆಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಗುಜರಾತ್‌ನ ದಿವ್ಯಾ ಹಾಗೂ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರೆಲ್ಲರೂ ನೆಲಮಂಗಲದಲ್ಲಿರುವ ಸಂಬಂಧಿಕರ ಮನೆಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿ ಓಮ್ನಿ ವ್ಯಾನ್‌ನಲ್ಲಿ ರಾತ್ರಿ ವಾಪಸು ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

ADVERTISEMENT

‘ಓಮ್ನಿ ವ್ಯಾನ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇದರಿಂದಾಗಿ ವ್ಯಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಧಗ ಧಗ ಉರಿಯಲಾರಂಭಿಸಿತ್ತು. ಒಳಗಿದ್ದವರು ಹೊರಗೆ ಬರಲು ಹರಸಾಹಸಪಟ್ಟರು. ವ್ಯಾನ್‌ನಲ್ಲಿಯೇ ಸಿಲುಕಿ ದಿವ್ಯಾ ಮೃತಪಟ್ಟರು. ಕೆಲವರನ್ನು ಸ್ಥಳೀಯರು ಹೊರಗೆ ಕರೆತಂದು ರಕ್ಷಿಸಿದ್ದಾರೆ’ ಎಂದು ಹೇಳಿದರು.

‘ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.