ADVERTISEMENT

ಬೆಂಗಳೂರು: ‘ಗೌರವ ಧನ ಸಿಗದೆ ಬೀದಿಗೆ ಬಿದ್ದಿದ್ದೇವೆ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 13:25 IST
Last Updated 26 ಮಾರ್ಚ್ 2021, 13:25 IST

ಬೆಂಗಳೂರು: ‘ಹಿಂದಿನ 27 ತಿಂಗಳುಗಳಿಂದ ನಮಗೆ ಗೌರವ ಧನವನ್ನೇ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಇದನ್ನೆ ನಂಬಿಕೊಂಡಿದ್ದ ನಾವು ಈಗ ಬೀದಿಗೆ ಬಿದ್ದಿದ್ದೇವೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ತರಬೇತಿ ಕೇಂದ್ರಗಳ ನೌಕರರ ಸಂಘದ ಸಿಬ್ಬಂದಿ ಅಳಲು ತೋಡಿಕೊಂಡರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೌಕರರು ‘ರಾಜ್ಯದಲ್ಲಿ ಒಟ್ಟು 21 ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರಗಳಿವೆ. ಇವೆಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸುತ್ತವೆ. ಇವುಗಳಲ್ಲಿ ಒಟ್ಟು 189 ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ. ನಮಗೆ ಹಿಂದಿನ 27 ತಿಂಗಳುಗಳಿಂದ ಗೌರವ ಧನವೇ ಸಿಕ್ಕಿಲ್ಲ. ಇದರಿಂದ ನಮ್ಮ ಬದುಕು ದುಸ್ಥರವಾಗಿದೆ’ ಎಂದರು.

‘ಈ ಸಂಬಂಧ ನಾವು ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಈಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯನ್ನೂ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದೇವೆ. ಹೀಗಿದ್ದರೂ ಕೂಡ ನಮ್ಮ ಸಮಸ್ಯೆಗೆ ಯಾರೂ ಕಿವಿಗೊಟ್ಟಿಲ್ಲ. ನಾವು ಬಹಳ ತಾಳ್ಮೆಯಿಂದಲೇ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.