ADVERTISEMENT

ಸಂಕಷ್ಟದಲ್ಲಿ ಬಡವರ ಕೈ ಹಿಡಿದ ಕಾಂಗ್ರೆಸ್‌

ಕಾಂಗ್ರೆಸ್‌ ಮುಖಂಡ ಕೆ. ಚಂದ್ರಶೇಖರ್ ಅವರಿಂದ ಪಡಿತರ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 19:29 IST
Last Updated 2 ಜೂನ್ 2021, 19:29 IST
ಕಾಂಗ್ರೆಸ್‌ ಮುಖಂಡ ಕೆ. ಚಂದ್ರಶೇಖರ್ ನೇತೃತ್ವದಲ್ಲಿ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ದಿನಸಿ ಕಿಟ್ ವಿತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಕೆ.ಚಂದ್ರಶೇಖರ್‌ ಇದ್ದರು -ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಮುಖಂಡ ಕೆ. ಚಂದ್ರಶೇಖರ್ ನೇತೃತ್ವದಲ್ಲಿ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ದಿನಸಿ ಕಿಟ್ ವಿತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಕೆ.ಚಂದ್ರಶೇಖರ್‌ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್, ಕಾಂಗ್ರೆಸ್‌ ಮುಖಂಡ ಕೆ. ಚಂದ್ರಶೇಖರ್‌ ಅವರು ಬಡವರಿಗೆ ಪಡಿತರ, ಹಣ್ಣು ಮತ್ತು ತರಕಾರಿ ಇರುವ ಕಿಟ್‌ಗಳನ್ನು ಬುಧವಾರ ಉಚಿತವಾಗಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಕೋವಿಡ್ ಬಿಕ್ಕಟ್ಟಿನಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಬಡವರ ಪರವಾಗಿದ್ದು ಪಕ್ಷದ ಮುಖಂಡರು ಸ್ವಂತ ಹಣದಿಂದ ಬಡವರಿಗೆ ಆಹಾರ ಧಾನ್ಯ ಸೇರಿದಂತೆ ಇನ್ನಿತರ ನೆರವು ನೀಡುತ್ತಿದ್ದಾರೆ’ ಎಂದರು.

‘ಅಧಿಕಾರದಲ್ಲಿರುವ ಬಿಜೆಪಿಯು ಬಡವರಿಗೆ ಸಹಾಯ ಮಾಡುತ್ತಿಲ್ಲ. ರಾಜ್ಯದಲ್ಲಿ ಹಾಗೂ ಬಸವನಗುಡಿ ಕ್ಷೇತ್ರದಲ್ಲಿ ಬಡವರಿಗೆ ಆಹಾರ ಒದಗಿಸುವಂತಹ ಕಾರ್ಯ ಮಾಡಿಲ್ಲ. ಆದರೆ, ಅಧಿಕಾರದಲ್ಲಿಲ್ಲದಿದ್ದರೂ ಕಾಂಗ್ರೆಸ್‌ ಈ ಕಾರ್ಯವನ್ನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಬಡವರ ಪರವಾಗಿಯೇ ಇದೆ. ಮುಂದಿನ ಬಾರಿ ಬಸವನಗುಡಿ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದಾರೆ’ ಎಂದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ‘ಬಿಜೆಪಿ ನೀಡುತ್ತಿರುವ ಪರಿಹಾರದ ಪ್ಯಾಕೇಜ್ ಕೇವಲ ಬೂಟಾಟಿಕೆಯಾಗಿದ್ದು ಇದುವರೆಗೂ ಒಬ್ಬ ಅರ್ಹ ಫಲಾನುಭವಿಯನ್ನೂ ತಲುಪಿಲ್ಲ’ ಎಂದು ದೂರಿದರು.

ಯು.ಬಿ. ವೆಂಕಟೇಶ್, ‘ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಆದರೆ, ಅದನ್ನೂ ಮಾರಾಟ ಮಾಡುವಂತಹ ಕಾರ್ಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ’ ಎಂದರು.

ಕೆ. ಚಂದ್ರಶೇಖರ್, ‘ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಅನಿವಾರ್ಯ ಹೌದು. ಆದರೆ, ಸರ್ಕಾರ ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಂಡು ಬಡವರ, ಮಧ್ಯಮ ವರ್ಗದವರ ಹಸಿವು ನೀಗಿಸುವ ಕಾರ್ಯ ಮಾಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.