ADVERTISEMENT

ಟೆಕಿ, ಉದ್ಯಮಿಗಳಿಗೆ ವಂಚಕರ ಗಾಳ

ಹೂಡಿಕೆ ಹೆಸರಿನಲ್ಲಿ ₹2 ಕೋಟಿ ವಂಚನೆ, ಲಾಭದ ಆಸೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿರುವ ಜನರು

ಆದಿತ್ಯ ಕೆ.ಎ
Published 14 ಜೂನ್ 2025, 19:31 IST
Last Updated 14 ಜೂನ್ 2025, 19:31 IST
...
...   

ಬೆಂಗಳೂರು: ಹೂಡಿಕೆಯ ಆಮಿಷವೊಡ್ಡಿ ಹಣ ದೋಚುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಪಶ್ಚಿಮ ವಿಭಾಗದಲ್ಲಿ ನೆಲಸಿರುವ ಟೆಕಿ, ಎಂಜಿನಿಯರ್‌ ಹಾಗೂ ಕಂಪ್ಯೂಟರ್ ಆಪರೇಟರ್‌ಗೆ ಗಾಳ ಹಾಕಿದ ಸೈಬರ್ ವಂಚಕರು, ₹2 ಕೋಟಿ ದೋಚಿದ್ದಾರೆ.

ಹೂಡಿಕೆಯ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ರಾಜ್ಯದ ಇತರೆ ಭಾಗಕ್ಕಿಂತ ಬೆಂಗಳೂರಿನಲ್ಲಿಯೇ ಹೆಚ್ಚಾಗಿದೆ. ಅದರಲ್ಲೂ ಪದವೀಧರರು, ನಿವೃತ್ತ ಅಧಿಕಾರಿಗಳು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಉದ್ಯಮಿಗಳೇ ಸೈಬರ್‌ ವಂಚಕರ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಸೈಬರ್‌ ಪೊಲೀಸರು ಹೇಳಿದರು.

ADVERTISEMENT

ಆರಂಭದಲ್ಲಿ ಸ್ವಲ್ಪಭಾಗ ಲಾಭಾಂಶ ನೀಡುವ ವಂಚಕರು, ನಂತರ ಹೆಚ್ಚಿನ ಆದಾಯ ಬಂದಿರುವಂತೆ ಆನ್‌ಲೈನ್‌ನಲ್ಲಿ ಮಾಹಿತಿ ತೋರಿಸುತ್ತಾರೆ. ಆ ಹಣ ಪಡೆಯಲು ತೆರಿಗೆ ರೂಪದಲ್ಲಿ ಮತ್ತಷ್ಟು ಹಣ ಪಾವತಿಸುವಂತೆ ಮನವೊಲಿಸುತ್ತಾರೆ. ಅವರ ಮಾತು ನಂಬಿ, ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಿದ ಬಳಿಕ ವಂಚಕರು ಸಂಪರ್ಕಕ್ಕೇ ಸಿಗುತ್ತಿಲ್ಲ. ಈ ರೀತಿ ವಂಚನೆಗೆ ಒಳಗಾದ ಹಲವರು, ಪ್ರಕರಣ ದಾಖಲಿಸಲು ನಿತ್ಯವೂ ಸೈಬರ್‌ ಠಾಣೆಗಳಿಗೆ ಬರುತ್ತಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

‘ವಂಚಕರ ಗಾಳಕ್ಕೆ ಸಿಲುಕಿ, ರಾಜರಾಜೇಶ್ವರಿ ನಗರದ 57 ವರ್ಷದ ಎಂಜಿನಿಯರ್‌ ಸತ್ಯನಾರಾಯಣ ಎಂಬುವವರು ₹1.44 ಕೋಟಿ ಕಳೆದುಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ಗೆ ಬಂದ ಜಾಹೀರಾತು ನಂಬಿ ವಂಚನೆಗೆ ಒಳಗಾಗಿದ್ದಾರೆ. ಇದೇ ರೀತಿ ದೊಡ್ಡ ಮೊತ್ತದ ಹಣವನ್ನು ಹಲವರು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚರಿಕೆ ವಹಿಸುತ್ತಿಲ್ಲ’ ಎಂದು ಸೈಬರ್‌ ಪೊಲೀಸರು ಹೇಳಿದರು.

‘ಸತ್ಯನಾರಾಯಣ ಅವರು ತಮ್ಮ ವಾಟ್ಸ್‌ಆ್ಯಪ್‌ ಪರಿಶೀಲನೆ ನಡೆಸುತ್ತಿದ್ದರು. ಷೇರು ವ್ಯವಹಾರ ಬಗ್ಗೆ ಜಾಹೀರಾತು ಬಂದಿತ್ತು. ಅದರ ಮೇಲೆ ಕ್ಲಿಕ್‌ ಮಾಡಿದಾಗ ಕ್ಯಾಪಿಟಲ್‌ ಹಂಟರ್ಸ್‌ ಎಂಬ ಗ್ರೂಪ್‌ಗೆ ದೂರುದಾರರು ಸೇರ್ಪಡೆ ಆಗಿದ್ದರು. ಆ ಗ್ರೂಪ್‌ನಲ್ಲಿ ಮಿತ್ತಲ್‌ ಎಂಬಾತ ಪರಿಚಯವಾಗಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುವ ಆಮಿಷವೊಡ್ಡಿದ್ದ. ನಂತರ ಅನಿಲ್‌ ಕುಮಾರ್ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಐಪಿಒ ಷೇರು ಬಗ್ಗೆ ಮಾಹಿತಿ ನೀಡಿ ₹50 ಸಾವಿರ ಹೂಡಿಕೆ ಮಾಡಿಸಿಕೊಂಡಿದ್ದ. ಅದಾದ ಬಳಿಕ ಅಧಿಕ ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರಲಿದೆ ಎಂಬುದಾಗಿ ಆಮಿಷವೊಡ್ಡಿದ್ದ’ ಎಂದು ಪೊಲೀಸರು ಹೇಳಿದರು.

ಪತ್ನಿ, ಪುತ್ರಿಯ ಖಾತೆಯಿಂದಲೂ ಹೂಡಿಕೆ: ‘ದೂರುದಾರರು, ತಮ್ಮ ಬ್ಯಾಂಕ್‌ ಅಲ್ಲದೇ ಪತ್ನಿ ಹಾಗೂ ಪುತ್ರಿಯ ಖಾತೆಯಲ್ಲಿದ್ದ ಹಣವನ್ನೂ ಹೂಡಿಕೆ ಮಾಡಿದ್ದರು. ಒಟ್ಟು ಏಳು ಖಾತೆಗಳಿಂದ ಆರೋಪಿಗಳು ನೀಡಿದ್ದ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

- ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ತಂತ್ರಜ್ಞಾನ ಆಧರಿಸಿ ಸೈಬರ್‌ ವಂಚಕರನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ
ಸೀಮಂತ್‌ ಕುಮಾರ್ ಸಿಂಗ್‌ ನಗರ ಪೊಲೀಸ್‌ ಕಮಿಷನರ್‌

14 ಬ್ಯಾಂಕ್‌ ಖಾತೆಗಳಿಂದ ₹67 ಲಕ್ಷ ಹೂಡಿಕೆ

ಆರ್‌.ಆರ್‌. ನಗರದ ಎಂ.ಜಿ.ಲೇಔಟ್‌ನಲ್ಲಿ ನೆಲಸಿರುವ ಕಂಪ್ಯೂಟರ್ ಆಪರೇಟರ್‌ ನೃತೇಶ್ವರ ಪ್ರಸಾದ್‌ ಅವರು ₹68.50 ಲಕ್ಷ ಕಳೆದುಕೊಂಡಿದ್ದಾರೆ. ಸತ್ಯನಾರಾಯಣ ಅವರಿಗೆ ವಂಚಿಸಿದ್ದ ಮಾದರಿಯಲ್ಲೇ ನೃತೇಶ್ವರ ಪ್ರಸಾದ್‌ಗೂ ಮೋಸ ಮಾಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ‘ಪ್ರಸಾದ್ ಅವರ ವಾಟ್ಸ್‌ಆ್ಯಪ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಆ ಸಂದೇಶದ ಮೇಲೆ ಕ್ಲಿಕ್‌ ಮಾಡಿದಾಗ 39 ಸ್ಟಾಕ್‌ ಇನ್ವೆಸ್ಟರ್‌ ಅಲೈನ್ಸ್‌ ಎಂಬ ಗ್ರೂಪ್‌ ಸೇರ್ಪಡೆ ಆಗಿದ್ದರು. ಸುಪ್ರಿಯಾ ಎಂಬಾಕೆ ಹೂಡಿಕೆಯ ಕುರಿತು ಮಾಹಿತಿ ನೀಡಿದ್ದಳು. ಆರಂಭದಲ್ಲಿ ನೃತೇಶ್ವರ ₹50 ಸಾವಿರ ಹಣ ಹೂಡಿಕೆ ಮಾಡಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಸೈಬರ್‌ ವಂಚಕರು ಆಮಿಷವೊಡ್ಡಿದ್ದರಿಂದ 14 ಬ್ಯಾಂಕ್‌ ಖಾತೆಗಳಿಂದ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು. ‘ಅಪರಿಚಿತ ಸಂಖ್ಯೆಯಿಂದ ಯಾವುದೇ ಸಂದೇಶ ಬಂದರೂ ಕ್ಲಿಕ್‌ ಮಾಡಬಾರದು. ಸಂಶಯ ಬಂದರೆ ಸಮೀಪದ ಠಾಣೆಗೆ ಮಾಹಿತಿ ನೀಡಬಹುದು’ ಎಂದು ಅಧಿಕಾರಿಯೊಬ್ಬರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.