ಬೆಂಗಳೂರು: ಆಹಾರ ಪೂರೈಕೆ ವಿಚಾರವಾಗಿ ಎರಡು ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಚಾಕು ಇರಿತದಿಂದ ಗಾಯಗೊಂಡಿದ್ದ ಡೆಲಿವರಿ ಬಾಯ್ ಸುನೀಲ್ (28) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
‘ಬಿಟಿಎಂ ಲೇಔಟ್ನ 2ನೇ ಹಂತದ 16ನೇ ಮುಖ್ಯರಸ್ತೆಯಲ್ಲಿ ಫೆ. 27ರಂದು ರಾತ್ರಿ ನಡೆದಿದ್ದ ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ ಸುನೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರಾಗಿ ಮಾ. 4ರಂದು ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.
‘ಕೊಲೆ ಆರೋಪದಡಿ ಸುನೀಲ್ ಅವರ ಸ್ನೇಹಿತರಾದ ತೇಜಸ್ ಹಾಗೂ ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದರು.
‘ಆಹಾರ ಪೂರೈಕೆ ಕಂಪನಿಯೊಂದರಲ್ಲಿ ಸ್ನೇಹಿತರಿಬ್ಬರು ಕೆಲಸ ಮಾಡುತ್ತಿದ್ದರು. ಆಹಾರ ಪೂರೈಕೆ ವಿಚಾರವಾಗಿ ಅವರ ನಡುವೆ ಜಗಳವಾಗಿತ್ತು. ಅದನ್ನು ಬಗೆಹರಿಸಲು ಇತರೆ ಸ್ನೇಹಿತರು ಮುಂದಾಗಿದ್ದರು. ಅದೇ ವೇಳೆ ಮಾತಿನ ಚಕಮಕಿ ನಡೆದು ಪರಸ್ಪರ ಗಲಾಟೆ ಆಗಿತ್ತು. ಆರೋಪಿಗಳು ಸುನೀಲ್ ಅವರ ಹೊಟ್ಟೆ, ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ಘಟನೆ ಸಂಬಂಧ ದೂರು–ಪ್ರತಿ ದೂರು ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.