ಬೆಂಗಳೂರು: ಸ್ಥಳೀಯರಿಂದ ಬಂದ ದೂರುಗಳನ್ನು ಆಧರಿಸಿ ಪಾಲಿಕೆ ಸದಸ್ಯರ ಮನೆ ಮೇಲೂ ಚುನಾವಣಾ ಆಯೋಗದ ಸಂಚಾರ ದಳದ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ದಾಳಿ ನಡೆಸಿದೆ.
‘ಮತದಾರರಿಗೆ ಹಣ ಹಾಗೂ ಇತರ ವಸ್ತುಗಳನ್ನು ಹಂಚುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಮಾರಪ್ಪನಪಾಳ್ಯ ವಾರ್ಡ್ನ ಪಾಲಿಕೆ ಸದಸ್ಯ ಎಂ.ಮಹಾದೇವ (ಜೆಡಿಎಸ್) ಹಾಗೂ ಕಾಡುಮಲ್ಲೇಶ್ವರ ವಾರ್ಡ್ನ ಸದಸ್ಯ ಜಿ.ಮಂಜುನಾಥರಾಜು (ಬಿಜೆಪಿ) ಅವರ ಮನೆ ತಪಾಸಣೆ ನಡೆಸಿದ್ದೇವೆ. ಅಲ್ಲಿ ಮತದಾರರಿಗೆ ಹಂಚಲು ಇಟ್ಟಿದ್ದ ಯಾವುದೇ ವಸ್ತುಗಳು ಸಿಕ್ಕಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಚೋಳನಾಯಕನಹಳ್ಳಿಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಜಯಪ್ಪ ರೆಡ್ಡಿ (ಬಿಜೆಪಿ), ಸಂಜಯನಗರ ಎನ್ಟಿಎಫ್ ಬಡಾವಣೆಯ ಜಯಸಿಂಹ (ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು) ಅವರ ಮನೆಗಳಲ್ಲೂ ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದರು.
‘ಸಾರ್ವಜನಿಕರಿಂದ ಬರುವ ಯಾವುದೇ ದೂರುಗಳನ್ನು ನಾವು ಕಡೆಗಣಿಸುತ್ತಿಲ್ಲ. ಮಾಹಿತಿ ಬಂದ ಕಡೆಗೆ ಹೋಗಿ ನಮ್ಮ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ಬರುತ್ತಿರುವ ಬಹುತೇಕ ಕರೆಗಳು ಹುಸಿ ಕರೆಗಳಾಗಿವೆ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.