ಬೆಂಗಳೂರು: ‘ಕೋಮುವಾದ, ಭ್ರಷ್ಟಾಚಾರ, ಸರ್ವಾಧಿಕಾರ, ಅಪರಾಧೀಕರಣದ ವಿರುದ್ಧ ಜನರನ್ನು ಎತ್ತಿಕಟ್ಟುವ ಗಾಂಧೀಜಿ ಎಂಬ ಪ್ರೇರಕ ಶಕ್ತಿ ಯುವಸಮೂಹಕ್ಕೆ ಬೇಕಾಗಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಯೋಗದಲ್ಲಿ ಸೋಮವಾರ ನಡೆದ ‘75ನೇ ವರ್ಷದ ಸರ್ವೋದಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಗಾಂಧೀಜಿ ಅವರ ಸತ್ಯನುಡಿ, ಸತ್ಯದ ದಾರಿ, ಮತ್ತು ಅವರ ಮಾರ್ಗವನ್ನು ಅನುಸರಿಸಿಕೊಂಡು ದೇಶ ಮುನ್ನಡೆಸುವುದನ್ನು ಈ ಸಂದರ್ಭದಲ್ಲಿ ಯುವ ಸಮೂಹ ಕಲಿಯಬೇಕಾಗಿದೆ’ ಎಂದರು.
‘ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಿದ್ದಕ್ಕೆ, ಕಾನೂನು ಉಲ್ಲಂಘನೆ ಎಂಬ ಹಲವು ಪ್ರಕರಣಗಳಲ್ಲಿ ಗಾಂಧೀಜಿ ಅವರನ್ನು ಬಂಧಿಸಲಾಗಿತ್ತು. ಆದರೆ, ಅವರು ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಮುಂದೆ ಆ ಎಲ್ಲಾ ತಪ್ಪುಗಳನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡರು. ಹೀಗಾಗಿ 2,332 ದಿನಗಳ ಜೈಲು ಶಿಕ್ಷೆ ಅನುಭವಿಸಿದರು. ಆದರೆ ಇವತ್ತು ಕೋರ್ಟ್ನ ಹೊರಗಡೆ ಬಾಬರಿ ಮಸೀದಿಯ ಧ್ವಂಸ, ಗೋದ್ರಾ ಹತ್ಯಾಕಾಂಡವನ್ನು ತಾನೇ ಮಾಡಿದ್ದು ಎಂದು ಮೀಸೆ ತಿರುಗಿಸಿ ಹೇಳುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಪ್ರತಿಯೊಬ್ಬರೂ ಸರ್ವೋದಯ ಪಾತ್ರೆ ಎಂಬ ಒಂದು ಹುಂಡಿಯನ್ನು ಪ್ರಾರಂಭಿಸಿ, ಅದರಲ್ಲಿ ನಿತ್ಯ ಹಣ ಸಂಗ್ರಹಿಸಬೇಕು. ಸರ್ವೋದಯ ದಿನದಂದು ಬಡವರಿಗೆ ದೀನದಲಿತರ ಶ್ರೇಯೋಭಿವೃದ್ಧಿಗೆ ಆ ಹಣವನ್ನು ವಿನಿಯೋಗಿಸಬೇಕು. ನಾನು 2006ರಿಂದ ಇದುವರೆಗೂ ಆ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇನೆ’ ಎಂದು ಹೇಳಿದರು.
ಗಾಂಧಿ ಸ್ಮಾರಕದ ಉಪಾಧ್ಯಕ್ಷ ಎನ್.ಆರ್. ವಿಶುಕುಮಾರ್, ವೂಡೇ.ಪಿ. ಕೃಷ್ಣ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಎಂ.ಎಸ್. ಆಶಾದೇವಿ, ನಟರಾಜ್ ಹುಳಿಯಾರ್ ಇದ್ದರು.
ಪಾಪು–ಬಾಪುವನ್ನು ನಾಟಕವನ್ನು ಪ್ರದರ್ಶನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.