ADVERTISEMENT

ಫೋಟೊ ತೆಗೆಯುವ ನೆಪದಲ್ಲಿ ಚಿನ್ನ ಕದಿಯುತ್ತಿದ್ದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:38 IST
Last Updated 7 ಜನವರಿ 2021, 19:38 IST
ಮಂಜೇಶ್
ಮಂಜೇಶ್   

ಬೆಂಗಳೂರು: ವೃದ್ಧರು,ಅನಕ್ಷರಸ್ಥ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದಿಯುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹುರುಳಿಚಿಕ್ಕನಹಳ್ಳಿ ನಿವಾಸಿ ಮಂಜೇಶ್ (37) ಬಂಧಿತ ಆರೋಪಿ. ಈತ ಕಳವು ಮಾಡಿದ್ದ ₹8.55 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಒಂಟಿಯಾಗಿರುವ ವೃದ್ಧರು ಹಾಗೂ ಅನಕ್ಷರಸ್ಥ ಮಹಿಳೆಯರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ಪಡಿತರ ಕಾರ್ಡ್‌ಗಳನ್ನು ಮಾಡಿಸಿಕೊಡುವುದಾಗಿ ಹೇಳುತ್ತಿದ್ದ. ಇದಕ್ಕಾಗಿ ಫೊಟೊ ತೆಗೆಯುವ ನೆಪದಲ್ಲಿ ಚಿನ್ನಾಭರಣಗಳನ್ನು ತೆಗೆಸುತ್ತಿದ್ದ. ಬಳಿಕ ಅವರ ಗಮನ ಬೇರೆಡೆಗೆ ಸೆಳೆದು ಚಿನ್ನ ದೋಚಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ADVERTISEMENT

ಹೆಸರಘಟ್ಟದ ಬಿಎಸ್‌ಎನ್‌ಎಲ್‌ ಕಚೇರಿ ಬಳಿ ಇದ್ದ ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ್ದಆರೋಪಿ, ಬೀರುವಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹೆಸರಘಟ್ಟ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರು ವಿಚಾರಣೆ ನಡೆಸಿದ್ದು, ಕದ್ದಿದ್ದ ಚಿನ್ನಾಭರಣಗಳನ್ನು ಗಿರವಿ ಇಡಲು ಬಂದಿರುವುದಾಗಿ ತಿಳಿಸಿದ್ದ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

‘ಆರೋಪಿ ವಿರುದ್ಧ ಆರ್‌.ಟಿ.ನಗರ, ಬೇಲೂರು, ಹೊಳೆನರಸೀಪುರ, ಮಂಗಳೂರು, ಮಣಿಪಾಲ, ತ್ಯಾಮಗೊಂಡ್ಲು, ಅಮೃತಹಳ್ಳಿ, ಬಾಗಲಗುಂಟೆ, ದೊಡ್ಡಬಳ್ಳಾಪುರ, ಕೆ.ಪಿ.ಅಗ್ರಹಾರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ವಿವಿಧ ಪ್ರಕರಣಗಳಡಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಬಂದಿದ್ದ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.