ADVERTISEMENT

ಅಕಾಡೆಮಿ ಸ್ಥಾನಕ್ಕಾಗಿ 370ನೇ ವಿಧಿ ಬಗ್ಗೆ ಬಾಯಿಬಿಡದ ಬುದ್ಧಿಜೀವಿಗಳು: ಸುಗತ

ಸಿ.ಎಸ್. ದ್ವಾರಕಾನಾಥ್‌ ಅವರ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 17:15 IST
Last Updated 8 ಆಗಸ್ಟ್ 2019, 17:15 IST
ನಗರದಲ್ಲಿ ಗುರುವಾರ ಸಿ.ಎಸ್ ದ್ವಾರಕಾನಾಥ್ (ಬಲದಿಂದ ಎರಡನೆಯವರು) ಅವರ ಗೋಡೆ ಕೃತಿಯನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು (ಮಧ್ಯದವರು) ಬಿಡುಗಡೆ ಮಾಡಿದರು. ಬರಹಗಾರ ಭಾಸ್ಕರ್ ಪ್ರಸಾದ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿ.ಎಂ. ಮಂಜುನಾಥ ಇದ್ದಾರೆ
ನಗರದಲ್ಲಿ ಗುರುವಾರ ಸಿ.ಎಸ್ ದ್ವಾರಕಾನಾಥ್ (ಬಲದಿಂದ ಎರಡನೆಯವರು) ಅವರ ಗೋಡೆ ಕೃತಿಯನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು (ಮಧ್ಯದವರು) ಬಿಡುಗಡೆ ಮಾಡಿದರು. ಬರಹಗಾರ ಭಾಸ್ಕರ್ ಪ್ರಸಾದ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿ.ಎಂ. ಮಂಜುನಾಥ ಇದ್ದಾರೆ   

ಬೆಂಗಳೂರು:‘ಸದ್ಯವಿವಿಧ ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಹುದ್ದೆಗಳು ಖಾಲಿ ಇವೆ. ಈ ಪೈಕಿ, ತಮಗೆ ಯಾವುದಾದರೊಂದಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಯಾವ ಬುದ್ಧಿಜೀವಿಗಳೂ ಕಾಶ್ಮೀರದ 370ನೇ ವಿಧಿ ರದ್ದತಿಯ ಕುರಿತು ಬಾಯಿ ಬಿಡಲಿಲ್ಲ’ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಹೇಳಿದರು.

‘ಮಾಧ್ಯಮಗಳು ಕೂಡ ಈ ಬಗ್ಗೆ ಸರಿಯಾಗಿ ಸುದ್ದಿ ಮಾಡಲಿಲ್ಲ. ಕೆಲವು ಚಾನೆಲ್‌ಗಳಂತೂ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷರಾಗಿದ್ದ ಶೇಖ್‌ ಅಬ್ದುಲ್ಲಾ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ, ಶೇಖ್‌ ಅಬ್ದುಲ್ಲಾ ಇರದಿದ್ದರೆ ಭಾರತಕ್ಕೆ ಕಾಶ್ಮೀರ ಸಿಗುತ್ತಲೇ ಇರಲಿಲ್ಲ’ ಎಂದರು.

‘ಜವಾಹರ ಲಾಲ್‌ ನೆಹರೂ ಓಲೈಕೆ ನಂತರ, ಕಾಶ್ಮೀರವು ಭಾರತದಲ್ಲಿಯೇ ಇರುವಂತೆ ಶೇಖ್‌ ಅಬ್ದುಲ್ಲಾ ಕ್ರಮ ಕೈಗೊಂಡರು. ಮುಂದೆ, ನೆಹರೂ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಅಬ್ದುಲ್ಲಾ ಅವರು ಹತ್ತು ವರ್ಷ ಜೈಲಿನಲ್ಲಿ ಕಳೆದು ಪಾಕಿಸ್ತಾನಕ್ಕೆ ಹೋದಾಗ, ಕಾಶ್ಮೀರವನ್ನು ಬೇಕೆಂದು ಪಾಕಿಸ್ತಾನ ಅವರಿಗೆ ಕೋರಿತ್ತು. ನಾನು ಜಾತ್ಯತೀತವಾದಿ. ನಿಮ್ಮ ಇಸ್ಲಾಮಿಕ್‌ ಸಿದ್ಧಾಂತದ ಜೊತೆ ನಾನು ಬರುವುದಿಲ್ಲ. ನಾನು ಸತ್ತರೂ ಅದು ಭಾರತದಲ್ಲಿಯೇ ಎಂದಿದ್ದರು’ ಎಂದು ಸುಗತ ಹೇಳಿದರು.

ADVERTISEMENT

‘ಈ ಬಗ್ಗೆ ಅಂದಿನ ಪತ್ರಕರ್ತ, ಈಗಿನ ರಾಜಕಾರಣಿ ಎಂ.ಜೆ. ಅಕ್ಬರ್‌ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಆದರೆ, ಮೊನ್ನೆ ಸಂಸತ್ತಿನಲ್ಲಿ 370 ವಿಧಿ ರದ್ದತಿ ಕುರಿತು ಘೋಷಿಸುವಾಗ, ಅವರೇ ಮೇಜು ಕುಟ್ಟುತ್ತಾ ಕುಳಿತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.