ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಯುವಕಾಂಗ್ರೆಸ್ ಮತ್ತು ಕೆಬಿಜಿ ಸ್ವಯಂ ಸೇವಕರ ಸಂಘ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಶ್ರಯದಲ್ಲಿ ಸಹಕಾರ ನಗರದ ದೇವ್-ಇನ್ ಶಾಲೆಯಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ದೇಶದಲ್ಲಿ ಉದ್ಯೋಗದ ಸಮಸ್ಯೆಯು ಯುವಜನಾಂಗವನ್ನು ಕಾಡುತ್ತಿದೆ. ಉದ್ಯೋಗಸೃಷ್ಟಿ ಪ್ರಮಾಣ ಕಡಿಮೆಯಿದೆ. ಇದರಿಂದ ಯುವಸಮುದಾಯ ಆತಂಕಕ್ಕೆ ಒಳಗಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಸನ್ನಿವೇಶದಲ್ಲಿ ಉದ್ಯೋಗಿಗಳ ಅನ್ವೇಷಣೆಯಲ್ಲಿರುವ ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಡಿ ತರಲಾಗಿದ್ದು, ಇದರಿಂದ ಇಬ್ಬರಿಗೂ ಅನುಕೂಲವಾಗಲಿ ಎಂದರು. ಮೇಳದಲ್ಲಿ ಇನ್ಫೊಸಿಸ್ ಬಿಪಿಒ, ಒಮೆಗಾ, ಎಚ್ಎಸ್ಬಿಸಿ, ಟೊಯೊಟಾ. ಎಲ್ಜಿ, ಮ್ಯಾಕ್ಸ್ ಲೈಫ್, ಎಚ್ಡಿಎಫ್ಸಿ, ಎಲ್ಐಸಿ, ಹಿಂದೂಸ್ತಾನ್ ಯೂನಿಲಿವರ್, ಟಫೆ. ಹೋಂಡಾ ಲಿಮಿಟೆಡ್, ಸೇರಿದಂತೆ 102 ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ನೋಂದಣಿ ಮಾಡಿಕೊಂಡಿದ್ದ ಒಟ್ಟು 4,500 ಉದ್ಯೋಗಾಕಾಂಕ್ಷಿಗಳ ಪೈಕಿ 651 ಮಂದಿ ವಿವಿಧ ಹುದ್ದೆಗಳಿಗೆ ಸ್ಥಳದಲ್ಲೇ ಆಯ್ಕೆಯಾದರು. ಅಲ್ಲದೆ 1,310 ಮಂದಿಗೆ ಮುಂದಿನ ಸಂದರ್ಶನಕ್ಕಾಗಿ ಆಹ್ವಾನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.