ಬೆಂಗಳೂರು: ‘ರಾಜ್ಯ ರಾಜಕೀಯ ದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ’ಕರ್ನಾಟಕ ರಾಷ್ಟ್ರ ಸಮಿತಿ’ (ಕೆಆರ್ಎಸ್) ಎಂಬ ನೂತನ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಾಗುತ್ತಿದೆ. ಹೊಸ ಪಕ್ಷಕ್ಕೆ ಆ 11ರಂದು ಚಾಲನೆ ನೀಡಲಾಗುವುದು’ ಎಂದು ಕೆಆರ್ಎಸ್ ಉಪಾಧ್ಯಕ್ಷ ಎಚ್.ಎಸ್.ಲಿಂಗೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್ನಲ್ಲಿ ಆ.10 ರಂದು ಬೆಳಿಗ್ಗೆ 10.30ಕ್ಕೆ ಪಕ್ಷದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ
ಎಚ್.ಎಸ್.ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಹಾಗೂ ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ಭಾಗವಹಿಸಲಿದ್ದಾರೆ’ ಎಂದರು.
‘ರಾಜ್ಯದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಪರ್ಯಾಯ ರಾಜಕೀಯ ಪಕ್ಷದ ಅಗತ್ಯವಿದೆ. ರಾಜ್ಯದಲ್ಲಿ ಕನ್ನಡಿಗರೇ ಪರಕೀಯರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕರ್ನಾಟಕದ ಅಸ್ಮಿತೆಯನ್ನು ಪಕ್ಷವು ಎತ್ತಿ ಹಿಡಿಯಲಿದೆ’ ಎಂದರು.
‘ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪಕ್ಷದಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಕನ್ನಡಿಗರ ಆಶೀರ್ವಾದ ನಮ್ಮ ಪಕ್ಷಕ್ಕೆ ಸಿಗಲಿದೆ’ ಎಂದು ಖಜಾಂಚಿ ಕೆ.ಬಿ. ಅರವಿಂದ್ ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.