ಬೆಂಗಳೂರು: ನಕಲಿ ಕಂಪನಿಗಳ ಹೆಸರಿನಲ್ಲಿ ಲ್ಯಾಪ್ಟಾಪ್ ಬಾಡಿಗೆ ಪಡೆದು, ಅವುಗಳನ್ನೇ ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದ ಆರೋಪದಡಿ ಮೂವರನ್ನು ಬೈಯಪ್ಪನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಮ್ಮನಹಳ್ಳಿ ಜಾನಕಿರಾಮ್ ಲೇಔಟ್ ನಿವಾಸಿ ಸೈಪ್ ಪಾಷಾ (25), ವೀರಣ್ಣಪಾಳ್ಯದ ಪಂಚಮುಖಿ ಹೋಮ್ಸ್ ನಿವಾಸಿ ಮೊಹಿನುದ್ದೀನ್ ಖುರೇಶಿ (26) ಹಾಗೂ ಹೆಣ್ಣೂರು ಬಂಡೆ ನಿವಾಸಿ ಪ್ರತೀಕ್ ನಗರಕರ್ (31) ಬಂಧಿತರು.
‘ಬಂಧಿತರಿಂದ ₹ 45 ಲಕ್ಷ ಮೌಲ್ಯದ 96 ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಗರದ ವಿವಿಧ ವಿಳಾಸದಲ್ಲಿ ಕಚೇರಿ ಇರುವುದಾಗಿ ಹೇಳಿ ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದ ಆರೋಪಿಗಳು, ಕಂಪನಿ ಕೆಲಸಕ್ಕಾಗಿ ಲ್ಯಾಪ್ಟಾಪ್ ಬೇಕೆಂದು ಹೇಳಿ ಬಾಡಿಗೆ ಪಡೆಯುತ್ತಿದ್ದರು. ಕೆಲ ತಿಂಗಳ ನಂತರ, ಕಂಪನಿ ನಷ್ಟದಲ್ಲಿರುವುದಾಗಿ ಹೇಳುತ್ತಿದ್ದರು. ಅದೇ ಕಾರಣ ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಲ್ಯಾಪ್ಟಾಪ್ ಮಾರಾಟ ಮಾಡುತ್ತಿದ್ದರು’ ಎಂದೂ ತಿಳಿಸಿದರು.
‘ಲ್ಯಾಪ್ಟಾಪ್ ಬಾಡಿಗೆ ನೀಡಿದವರ ಗಮನಕ್ಕೆ ಬಾರದಂತೆ ಲ್ಯಾಪ್ಟಾಪ್ ಮಾರಿ ಆರೋಪಿಗಳು ಹಣ
ಗಳಿಕೆ ಮಾಡಿದ್ದರು. ಈ ಬಗ್ಗೆ ಕಂಪನಿಯೊಂದರ ಪ್ರತಿನಿಧಿ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಹೇಳಿದರು.
ಅಪರಾಧಧ ಹಿನ್ನಲೆ: ‘ಬಂಧಿತ ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರು. ಮಡಿವಾಳ, ಸಂಪಿಗೆಹಳ್ಳಿ, ಅಶೋಕನಗರ, ಆರ್.ಟಿ.ನಗರ, ಮಾರತ್ತಹಳ್ಳಿ, ಜೆ.ಪಿ.ನಗರ ಹಾಗೂ ಹೈದರಾಬಾದ್ ಠಾಣೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.