ಬೆಂಗಳೂರು: ಹಳಿ ಮೇಲೆ ಬಿದ್ದಿದ್ದ ಮೊಬೈಲ್ ಮೇಲೆತ್ತಿಕೊಳ್ಳುವಾಗ ರೈಲು ಹರಿದು ಸಾಬಣ್ಣ (23) ಎಂಬುವರ ಕಾಲು ತುಂಡರಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಸಾಬಣ್ಣ (23), ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಎಲ್ಲಿ ವಾಸವಿದ್ದರು ? ಏನು ಕೆಲಸ ಮಾಡುತ್ತಿದ್ದರು ? ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ರೈಲ್ವೆ ಪೊಲೀಸ್ ಮೂಲಗಳು ಹೇಳಿವೆ.
‘ಸಾಬಣ್ಣ ಅವರು ಮೊಬೈಲ್ ನೋಡುತ್ತ ಭಾನುವಾರ ಹಳಿಪಕ್ಕದಲ್ಲಿ ನಡೆದುಕೊಂಡು ಹೊರಟಿದ್ದರು. ಇದೇ ಸಂದರ್ಭದಲ್ಲಿ ಮೊಬೈಲ್ ಕೈಯಿಂದ ಜಾರಿ ಹಳಿ ಮೇಲೆ ಬಿದ್ದಿತ್ತು. ಅದನ್ನು ಮೇಲೆತ್ತಿಕೊಳ್ಳಲೆಂದು ಸಾಬಣ್ಣ, ಹಳಿಗೆ ಇಳಿದಿದ್ದರು. ಅವಾಗಲೇ ಅತೀ ವೇಗದಲ್ಲಿ ರೈಲು ಬಂದಿತ್ತು. ಹಳಿಯಿಂದ ದಾಟಬೇಕು ಎನ್ನುವಷ್ಟರಲ್ಲೇ ಸಾಬಣ್ಣ ಕಾಲಿನ ಮೇಲೆ ರೈಲು ಹರಿದಿರುವುದು ಪ್ರತ್ಯಕ್ಷದರ್ಶಿಗಳಿಂದ ಗೊತ್ತಾಗಿದೆ’ ಎಂದೂ
ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.