ಬೆಂಗಳೂರು: ‘ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ನಂಬಿಸಿದ್ದ ಸಿಲ್ವರ್ ಸ್ಟಾರ್ ಪ್ರಕಾಶ್ ಎಂಬಾತ ₹ 6.75 ಕೋಟಿ ಪಡೆದುಕೊಂಡು ವಂಚಿಸಿದ್ದಾನೆ’ ಎಂದು ಆರೋಪಿಸಿ ವಿ.ನಾಗರಾಜ್ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ.
‘ಚಿನ್ನದ ಕುಸರಿ ಕೆಲಸ ಮಾಡುವ ನಾಗರಾಜ್ ಬುಧವಾರ ದೂರು ನೀಡಿದ್ದಾರೆ. ಆರೋಪಿ ಪ್ರಕಾಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ದೂರಿನ ವಿವರ: ‘2018ರ ಮಾರ್ಚ್ನಲ್ಲಿಸಿಲ್ವರ್ ಸ್ಟಾರ್ ಪ್ರಕಾಶ್ನನ್ನು ಪರಿಚಯ ಮಾಡಿಸಿದ್ದ ಸ್ನೇಹಿತನೊಬ್ಬ, ‘ಇವರು ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ₹ 1 ಲಕ್ಷ ಹೂಡಿಕೆ ಮಾಡಿಸಿಕೊಂಡು 100 ದಿನಗಳಲ್ಲಿ ₹ 2 ಲಕ್ಷ ವಾಪಸು ಕೊಡುತ್ತಾರೆ’ ಎಂಬುದಾಗಿ ತಿಳಿಸಿದ್ದ’ ಎಂದು ನಾಗರಾಜ್ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ಜೊತೆಯೂ ಮಾತನಾಡಿದ್ದ ಪ್ರಕಾಶ್, ‘ನೀವು ₹ 1 ಲಕ್ಷ ಕೊಟ್ಟರೆ 80 ದಿನದಲ್ಲೇ ₹ 2 ಲಕ್ಷ ವಾಪಸು ಕೊಡುತ್ತೇನೆ’ ಎಂಬುದಾಗಿ ಹೇಳಿದ್ದ. ಆತನ ಮಾತು ನಂಬಿ ಹಣ ಹೂಡಿಕೆ ಮಾಡಿದ್ದೆ. ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಹೂಡಿಕೆ ಮಾಡಿಸಿದ್ದೆ. ಈಗ ಆತ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.