ADVERTISEMENT

ಬೆಂಗಳೂರಲ್ಲಿ ತಾಯಿ-ಮಗುವಿಗೆ ಬ್ರಿಟನ್ ರೂಪಾಂತರ ಸೋಂಕು 

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 9:26 IST
Last Updated 29 ಡಿಸೆಂಬರ್ 2020, 9:26 IST
ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಆರೋಗ್ಯ ಸಚಿವ ಡಾ.ಕೆ. ಸುಧಾಕರ್   

ಬೆಂಗಳೂರು: 'ನಗರದಲ್ಲಿ ತಾಯಿ ಮತ್ತು ಮಗು ಸೇರಿ ಮೂವರಿಗೆ ಬ್ರಿಟನ್ ರೂಪಾಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲರನ್ನೂ ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದೆ' ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಹಿಳೆಯವಾಹನ ಚಾಲಕ, ಮನೆಗೆಲಸದವರನ್ನು ಭೇಟಿ ಮಾಡಿ, ಪ್ರತ್ಯೇಕವಾಗಿರಿಸಿದ್ದು, ಪರೀಕ್ಷೆ ನಡೆಸಲಾಗಿದೆ ಎಂದರು.

'ದೇಶದ 10 ಪ್ರಯೋಗಾಲಯಗಳಲ್ಲಿ ಈ ಮಾದರಿಯ ಪರೀಕ್ಷೆಯ ನಡೆಸುತ್ತಿದೆ. ಅದರಲ್ಲಿ ಎರಡು ರಾಜ್ಯದಲ್ಲಿವೆ. ಇದರ ಪರೀಕ್ಷೆ ಮಾಡಿದವರಲ್ಲಿ 27 ಜನರಿಗೆ ಕೋವಿಡ್ ದೃಢಪಟ್ಟಿದೆ. ವಂಶವಾಹಿ ಪರೀಕ್ಷೆ ನಂತರ ಮೂವರಿಗೆ ಬ್ರಿಟನ್ ರೂಪಾಂತರ ಸೋಂಕು ತಗುಲಿರುವುದು ಗೊತ್ತಾಗಿದೆ' ಎಂದರು.
'ನಿಮ್ಹಾನ್ಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೋವಿಡ್ ಬಂದಿರುವ 27 ಮಂದಿಯನ್ನೂ ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ' ಎಂದರು.
'ಈ 27 ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಭೇಟಿ ಮಾಡಿ ಅವರನ್ನೂ ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.‌ ಮಾರ್ಗಸೂಚಿಯಂತೆ 28 ದಿನಗಳವರೆಗೆ ಐಸೋಲೇಟ್ ಮಾಡಲಾಗುವುದು' ಎಂದರು.

ADVERTISEMENT

48 ಗಂಟೆಗಳಲ್ಲಿ ಪತ್ತೆ: 'ಇಂಗ್ಲೆಂಡ್ ನಿಂದ ಈ ವ್ಯಕ್ತಿಗಳ‌ ಜೊತೆ ಬಂದ ಉಳಿದ ಪ್ರಯಾಣಿಕರ ವಿವರಗಳನ್ನೂ ನಾಗರಿಕ ವಿಮಾನಯಾನ ಸಚಿವಾಲಯದಿಂದ ಪಡೆದುಕೊಂಡಿದ್ದೇವೆ. ಭೇಟಿ ಮಾಡಿ ಅವರ ಆರೋಗ್ಯದ ಪರಿಸ್ಥಿತಿಯನ್ನೂ ತಿಳಿದುಕೊಳ್ಳಲಾಗಿದೆ. ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ' ಎಂದರು.

'ನಾಪತ್ತೆಯಾದವರ ಬಗ್ಗೆ ಗೃಹಸಚಿವರೊಂದಿಗೆ ಮಾತನಾಡಿದ್ದೇವೆ. 48 ಗಂಟೆಗಳಲ್ಲಿ ಪತ್ತೆ ಮಾಡಿ ಕೊಡುತ್ತೇವೆ. 280ಕ್ಕೂ ಹೆಚ್ಚು ಜನ‌ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ' ಎಂದರು.

'ನಾಪತ್ತೆಯಾದವರು ಅವರ ಮತ್ತು ಅವರ ಸಂಪರ್ಕಕ್ಕೆ ಬಂದವರ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಾನು‌ ಮನವಿ ಮಾಡುತ್ತೇನೆ. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ' ಎಂದು ಅವರು ಎಚ್ಚರಿಸಿದರು.

ಲಾಕ್ ಡೌನ್ ಅಗತ್ಯವಿಲ್ಲ:'ಮತ್ತೆ ಲಾಕ್ ಡೌನ್ ಅಗತ್ಯವಿಲ್ಲ. ಈಗ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಸಾವಿರಾರು ಜನರ ಪೈಕಿ ಕೇವಲ ಮೂವರಿಗೆ ರೂಪಾಂತರ ಸೋಂಕು ತಗುಲಿದೆ. ಎಲ್ಲರನ್ನೂ ಐಸೋಲೇಷನ್ ಮಾಡಿದ್ದೇವೆ. ಸೋಂಕು ಹರಡದಂತೆ ಎಚ್ಚರ ವಹಿಸಿರುವುದರಿಂದ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಅವಶ್ಯಕತೆ ಇಲ್ಲ' ಎಂದರು.

ಶಾಲೆ ಪುನರಾರಂಭ: 'ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ತರಗತಿಗಳು ನಿಗದಿಯಂತೆ ಪುನರಾರಂಭವಾಗುತ್ತವೆ. 6ರಿಂದ 9ನೇ ತರಗತಿ‌ ಮಕ್ಕಳಿಗೆ ವಿದ್ಯಾಗಮವೂ ನಡೆಯುತ್ತದೆ' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.