ADVERTISEMENT

‘ಜೀನ್‌ ಎಡಿಟಿಂಗ್‌ನಿಂದ ಜೈವಿಕ ಸಮರ ಭೀತಿ’

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:09 IST
Last Updated 5 ಮೇ 2019, 19:09 IST

ಬೆಂಗಳೂರು: ಎತ್ತರ, ಬಣ್ಣ, ರೋಗನಿರೋಧಕ ಶಕ್ತಿ, ಜಾಣತನದ ಮಟ್ಟ ಮುಂತಾದ ಗುಣಲಕ್ಷಣಗಳ ಮೂಲವಿರುವುದು ಜೀವಿಯ ವಂಶವಾಹಿಯಲ್ಲಿ (ಜೀನ್‌). ಈ ಮೂಲಗುಣಗಳಿಗೆ ಕಾರಣವಾದ ಜೀನ್‌ಗಳನ್ನೇ ತಿದ್ದುವ ಸಂಶೋಧನೆಗಳು ಇತ್ತೀಚೆಗೆ ಮುನ್ನೆಲೆಗೆ ಬರುತ್ತಿವೆ. ಇದರಿಂದ ಪ್ರಯೋಜನಗಳಿವೆಯೇ? ಅಥವಾ ಇದು ಅಪಾಯ ತಂದೊಡ್ಡಲಿದೆಯೇ?

ಜೀವಿಗಳ ಡಿಎನ್‌ಎಯನ್ನು ಉದ್ದೇಶಪೂರ್ವಕವಾಗಿ ಮಾರ್ಪಾಡು ಮಾಡುವ ತಂತ್ರಜ್ಞಾನದ (ಜೀನ್‌ ಎಡಿಟಿಂಗ್‌) ಬೆಳವಣಿಗೆಗಳ ಬಗ್ಗೆ ಯುವ ವಿಜ್ಞಾನಿ ಸುಷ್ಮಾ ಪ್ರಭಾಕರ್‌ ಭಾನುವಾರ ಬೆಳಕು ಚೆಲ್ಲಿದರು. ಮುನ್ನೋಟ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಳಿಶಾಸ್ತ್ರದ ಪಿತಾಮಹ ಗ್ರೆಗರ್‌ ಮೆಂಡಲ್‌ ಬಟಾಣಿ ಗಿಡದ ಗುಣಗಳನ್ನು ಅರಿಯಲು ನಡೆಸಿದ ಸಂಶೋಧನೆ ವಂಶವಾಹಿ ತಂತ್ರಜ್ಞಾನದ (ಜೆನೆಟಿಕ್ಸ್‌) ಹುಟ್ಟಿಗೆ ಕಾರಣವಾಯಿತು. ನಾವು ದಾರಿಯಲ್ಲಿ ಬಹು ದೂರ ಸಾಗಿ ಬಂದಿದ್ದೇವೆ. ಮನುಷ್ಯನ ಡಿ.ಎನ್.ಎ ತಿದ್ದುವ ಮೂಲಕ ಕಾಯಿಲೆಗಳನ್ನು ಗುಣಪಡಿಸಬಹುದು. ಹೈನುಗಾರಿಕೆ ಮತ್ತಿತರ ಕ್ಷೇತ್ರಗಳಲ್ಲೂ ಇದರಿಂದ ಅನೇಕ ಪ್ರಯೋಜನಗಳಿವೆ. ಆದರೆ, ಇದರಿಂದ ಅಪಾಯವೂ ಕಟ್ಟಿಟ್ಟ ಬುತ್ತಿ’ ಎಂದರು.

ADVERTISEMENT

‘ಜೀನ್ ಎಡಿಟಿಂಗ್‌ ಭವಿಷ್ಯದಲ್ಲಿ ಜೈವಿಕ ಸಮರಗಳಿಗೆ ಕಾರಣವಾಗುವ ಅಪಾಯವಿದೆ. ಇದು ಮನುಕುಲದ ವಿನಾಶಕ್ಕೂ ಕಾರಣವಾಗಬಲ್ಲದು. ಈ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಅಸಮತೋಲನಕ್ಕೂ ಕಾರಣವಾಗಲಿದೆ. ವಂಶವಾಹಿ ಬದಲಾವಣೆಗೆ ಒಳಗಾದ ಜೀವಿಗಳು ಪ್ರಯೋಗಾಲಯದಿಂದ ಆಕಸ್ಮಿಕವಾಗಿ ಹೊರಪ್ರಪಂಚ ಸೇರಿದರೆ ಅದರಿಂದಾಗುವ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ. ಈ ತಂತ್ರಜ್ಞಾನ ದುರುಪಯೋಗವಾಗುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.