ಬೆಂಗಳೂರು: ರಂಜಾನ್ ಸಂಭ್ರಮದ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಆರಂಭಗೊಂಡ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ವ್ಯಕ್ತಿ ಕೊಲೆಯಾದ ಘಟನೆ ಪಾದರಾಯನಪುರದ ಮಾಂಸದ ಅಂಗಡಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ನಿವಾಸಿ ಸಿಗ್ಮತ್ (33) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಸಾದಿಕ್, ಬಾಬು, ಮುಬಾರಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಾದರಾಯನಪುರದ ಮೂರನೇ ಅಡ್ಡರಸ್ತೆಯಲ್ಲಿರುವ ನ್ಯಾಷನಲ್ ಪೌಲ್ಟ್ರಿ ಚಿಕನ್ ಅಂಗಡಿಯಲ್ಲಿ ಸಿಗ್ಮತ್ ಕೆಲಸ ಮಾಡುತ್ತಿದ್ದು, ಪಕ್ಕದ ಮಾಂಸದ ಅಂಗಡಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಮಾಂಸದ ಅಂಗಡಿ ಮಾಲೀಕ ತನ್ನ ನಾಲ್ವರು ನೌಕರರಿಗೆ ಮಂಗಳವಾರ ರಾತ್ರಿ ₹ 4,000 ಕೊಟ್ಟು, ಎಲ್ಲರೂ ಹಂಚಿಕೊಳ್ಳುವಂತೆ ಹೇಳಿದ್ದರು.
ಬುಧವಾರ ಬೆಳಿಗ್ಗೆ ಅಂಗಡಿಗೆ ಬಂದ ಎಲ್ಲರೂ ಮಧ್ಯಾಹ್ನದವರೆಗೆ ಕೆಲಸ ಮಾಡಿ, ನಂತರ ಅದೇ ಹಣದಲ್ಲಿ ಊಟ ಮಾಡಿಕೊಂಡು ವಾಪಸು ಬಂದಿದ್ದಾರೆ. ಉಳಿಕೆ ಹಣದ ಹಂಚಿಕೆ ವಿಚಾರದಲ್ಲಿ ನಾಲ್ವರ ನಡುವೆ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅದನ್ನು ಗಮನಿಸಿದ ಸಿಗ್ಮತ್, ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವಂತೆ ಮನವಿ ಮಾಡಿದ್ದಾನೆ.
ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ‘ಜಗಳ ಬಿಡಿಸಲು ನೀನು ಯಾರು’ ಎಂದು ಪ್ರಶ್ನಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಅಲ್ಲೇ ಇದ್ದ ಚಾಕುವಿನಿಂದ ಸಿಗ್ಮತ್ನ ತೊಡೆಯ ಭಾಗಕ್ಕೆ ಇರಿದಿದ್ದಾನೆ. ಇತರ ಆರೋಪಿಗಳೂ ಸಿಗ್ಮತ್ ಮೇಲೆ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಗ್ಮತ್ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾ ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಪೊಲೀಸರು ತಿಳಿಸಿದರು.
ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.